ಡಾ. ದಡ್ಡೇನವರ ಪರ ನೇಕಾರ ಸಮುದಾಯ ಬ್ಯಾಟಿಂಗ್‌
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದಲ್ಲಿ ಭಾರಿ ಲಾಭಿ ಶುರುವಾಗಿದ್ದು, ಶೀಘ್ರವೇ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಂದರ್ಭದಲ್ಲಿ ತೇರದಾಳದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಈ ಬಾರಿ ಪ್ರಬಲ ಹಾಗು ನಿರ್ಣಾಯಕ ಸಮುದಾಯವಾಗಿರುವ ನೇಕಾರರಿಗೆ ನೀಡಬೇಕೆಂಬ ಪಟ್ಟು ಬಿಗಿಯಾಗಿದೆ.
ಬನಹಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಟಗಾರ ಸಮಾಜದ ಜಿಲ್ಲಾಧ್ಯಕ್ಷ, ದೇವರ ದಾಸಿಮಯ್ಯ ಸೇವಾ ಸಂಘದ ಅಧ್ಯಕ್ಷ ಡಾ. ಪಿ.ವಿ. ಪಟ್ಟಣ ಮಾತನಾಡಿ, ನೈಜ ನೇಕಾರ ಸಮುದಾಯದವರಿಗೆ ಟಿಕೆಟ್ ನೀಡಬೇಕು.
 ಈ ಬೇಡಿಕೆಯ ಮುಂಚೂಣಿಯಲ್ಲಿರುವ ಡಾ. ಎಂ.ಎಸ್. ದಡ್ಡೇನವರ ಪಕ್ಷದ ಹಳೆಯ ಕಾರ್ಯಕರ್ತರಾಗಿದ್ದು, ನೇಕಾರರ ನಾಡಿಮಿಡಿತ ಅರಿತವರಾಗಿದ್ದಾರೆ. ಟಿಕೆಟ್ ಇವರಿಗೆ ನೀಡಿದ್ದಾದಲ್ಲಿ ತೇರದಾಳದಲ್ಲಿ ನಿರಾಯಾಸದ ಗೆಲುವು ಕಾಂಗ್ರೆಸ್‌ದ್ದಾಗಿದೆ ಎಂದರು.
ಉಮಾಶ್ರೀ ನೇಕಾರರಲ್ಲ
 ಮಾಜಿ ಸಚಿವೆ ಉಮಾಶ್ರೀಯವರು ನೇಕಾರರ ಹೆಸರು ಹೇಳಿ 2008 ರಿಂದ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದಿದ್ದಾರೆ. ಅವರು ನೇಕಾರ ಸಮುದಾಯದವರಲ್ಲವೆಂದು ಡಾ. ಪಿ.ವಿ. ಪಟ್ಟಣ ಗಂಭೀರ ಆರೋಪ ಮಾಡಿದ್ದಾರೆ.
ನೇಕಾರ ಸಮುದಾಯದ ಮೇಲೆ ನಿರಂತರ ಗದಾಪ್ರಹಾರ ನಡೆಯುತ್ತಲೇಯಿದ್ದು, ಈ ಬಾರಿ ಹೈಕಮಾಂಡ್ ನಿರ್ಲಕ್ಷ್ಯ ಮಾಡಿದರೆ ಪಕ್ಷಕ್ಕೆ ಹಾನಿ ಕಟ್ಟಿಟ್ಟ ಬುತ್ತಿಯೆಂದು ಮಹಾದೇವ ಜಕ್ಕನವರ ತಿಳಿಸಿದರು.
ಪಕ್ಷದ ಆಂತರಿಕ ವಿಚಾರಕ್ಕನುಗುಣವಾಗಿ ಅಭ್ಯರ್ಥಿ ಆಯ್ಕೆ ಅನಿವರ‍್ಯವಾಗಿದ್ದು, ಪಕ್ಷದಿಂದ ಬಂಡಾಯ ಮಾಡುವದಿಲ್ಲ ಬದಲಾಗಿ ಪಕ್ಷಕ್ಕೆ ವಿನಾಕಾರಣ ಸೋಲಿನ ಶಿಕ್ಷೆಯಾಗುವದು ನಿಶ್ಚಿತವಾಗಿದ್ದು, ಇದಕ್ಕೆ ಅವಕಾಶ ಕಲ್ಪಿಸದೆ ಸ್ಥಳೀಯ ನೇಕಾರ ಅಭ್ರ‍್ಥಿಗೆ ಅವಕಾಶ ಕಲ್ಪಿಸಬೇಕೆಂದು ಜಕ್ಕನವರ ತಿಳಿಸಿದರು.