ಶ್ರೀಶೈಲಂ : ನಂದಿ(ಬಸವಣ್ಣ)ಗೂ ಮಾಸ್ಕಾ?
ಇತ್ತೀಚೆಗೆ ಅಂತರ್ಜಾಲದಲ್ಲಿ ನಂದಿ ವಿಗ್ರಹಕ್ಕೆ ಮಾಸ್ಕ್ ಹಾಕಿದ ಫೋಟೋ ಒಂದು ವೈರಲ್ ಆಗಿತ್ತು. ಇದರ ಮೂಲ ಹುಡುಕುತ್ತಾ ಹೋದ ನನಗೆ ಒಂದು ವಿಶಿಷ್ಟ ಆಚರಣೆ ಅಥವಾ ಸಂಪ್ರದಾಯದ ಬಗ್ಗೆ ತಿಳಿಯಿತು.
ಆ ನಂದಿಯ ಫೋಟೋ ಶ್ರೀಶೈಲಂನ ಮಲ್ಲಿಕಾರ್ಜುನ ದೇಗುಲದ ಮುಂದಿರುವ ಶನಗಲ(ಕಡಲೆ) ಬಸವಣ್ಣ ನದ್ದು ಪ್ರದೋಷ ಪೂಜೆಯ ಸಮಯದಲ್ಲಿ ನಂದಿಗೆ ಅಭಿಷೇಕ ಮಾಡಿದ ನಂತರ ಹರಿಸಿನ ಬಣ್ಣದ ಬಟ್ಟೆಯಲ್ಲಿ ನೆನೆಸಿದ ಕಡಲೆಯನ್ನು ರುಬ್ಬಿ ನಂದಿಯ ಬಾಯಿಗೆ ಕಟ್ಟಲಾಗುತ್ತದೆ. ಇದು ಪ್ರದೋಷ ಪೂಜೆಯ ಒಂದು ವಿಧಿವಿಧಾನ ಅಷ್ಟೇ ಆದರೆ ತಿಳಿಯದವರು ನಂದಿಗೂ ಮಾಸ್ಕ್ ಅಂತ ಪ್ರಚಾರ ಮಾಡಿದರು ನಂತರ ಶ್ರೀಶೈಲಂನ ದೇಗುಲ ಆಡಳಿತ ವರ್ಗ ಟ್ವಿಟ್ಟರ್ ನಲ್ಲಿ ಅದು ಮಾಸ್ಕ್ ಅಲ್ಲವೆಂದು ಸ್ಪಷ್ಟನೆ ನೀಡಿತು.
   ಇಷ್ಟಕ್ಕೂ ಏನಿದು ಪ್ರದೋಷ ಪೂಜೆ 
ಸೂರ್ಯಾಸ್ತದ ಮೊದಲು 90 'ನಿಮಿಷ ಹಾಗೂ ಸೂರ್ಯಾಸ್ತದ ನಂತರ 60 ನಿಮಿಷಗಳ ಸಮಯವನ್ನು ಪ್ರದೋಷ ಸಮಯ ಅನ್ನುತ್ತೇವೆ. ಈ ಪ್ರದೋಷ ಸಮಯಕ್ಕೆ ಇಷ್ಟು ಮಹತ್ವ ಬರಲು ಕಾರಣವಾದ ಒಂದು ಕಥೆಯೂ ಜನಜನಿತ ದೇವದಾನವರು ಸಮುದ್ರ ಮಂಥನ ಮಾಡುವಾಗ ಮೊದಲು ಗರಳ ಹೊರಬಂದು ಅದನ್ನು ಶಿವ ಪ್ರಾಶನ ಮಾಡಿದಾಗ ಪಾರ್ವತಿಯ ಆತನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ ಆಗ ಆ ಗರಳವು ಆತನ ಕಂಠದಲ್ಲೇ ಉಳಿದು ಆತ ನೀಲಕಂಠನಾಗಿ ಪ್ರಪಂಚದ ಎಲ್ಲಾ ಜೀವಕೋಟಿಗಳನ್ನೂ ಕಾಪಾಡುತ್ತಾನೆ ಈ ವಿಸ್ಮಯವನ್ನು ನೋಡಲು ದೇವಾಧಿದೇವತೆಗಳು ಭೂಮಿಗಿಳಿದು ಬರುತ್ತಾರೆ. ಆ ಸಮಯವೇ ಪ್ರದೋಷ,ಈ ಸಮಯದಲ್ಲಿ ಮಾಡುವ ಶಿವನ ಪೂಜೆ ಹಾಗೂ ಶಿವನ ವಾಹನವಾದ ನಂದಿಯ ಪೂಜೆ ನಮಗೆ ವಿಶೇಷ ಫಲಗಳನ್ನು ನೀಡುತ್ತದೆ ಎಂದು ಆಸ್ತಿಕರ ಅಭಿಪ್ರಾಯ. ಎಲ್ಲಾ ಶಿವ ದೇಗುಲಗಳಲ್ಲಿ ಪ್ರದೋಷ ಪೂಜೆಗಳು ನಡೆಯುತ್ತವೆ . ಕೆಲವರು ಆದಿನ ಉಪವಾಸ ಕೈಗೊಳ್ಳುತ್ತಾರೆ. ಬಿಲ್ವಪತ್ರೆಯಿಂದ ಶಿವನನ್ನು ಅರ್ಚಿಸುತ್ತಾರೆ. ಜಾಗರಣೆ ಮಾಡುತ್ತಾರೆ. ಶಿವನ ವಾಹನ ನಂದಿಗೂ ಪೂಜೆ ನೆರವೇರುತ್ತದೆ.
ಶ್ರೀಶೈಲಂನ ಮಲ್ಲಿಕಾರ್ಜುನ ದೇಗುಲದ ಮುಂದಿರುವ ಶನಗಲ (ಕಡಲೆ ) ಬಸವಣ್ಣನಿಗೆ ನಡೆಯುವ ಪ್ರದೋಷ ಸಮಯದ ಅಭಿಷೇಕ ಇತರೆ ದೇಗುಲಗಳ ಪ್ರದೋಷ ಪೂಜೆಗಿಂತ ಮಹತ್ವದ್ದಾಗಿದೆ. ಇಲ್ಲಿ ನಂದಿಯ ವಿಗ್ರಹಕ್ಕೆ ಪಂಚಾಮೃತ, ಹರಿದ್ರೋದಕ, ಕುಂಕುಮೋದಕ,
ಗಂಧೋದಕ,ಭಸ್ಮೋದಕ,ರುದ್ರಾಕ್ಷೋದಕ, ಪುಷ್ಪೋದಕ, ಸುವರ್ಣೋದಕ, ಬಿಲ್ವೋದಕ ಹಾಗೂ ಶುದ್ಧೋದಕಗಳಿಂದ ಅಭಿಷೇಕ ನಡೆಸಲಾಗುತ್ತದೆ. ನಂತರ ಮಲ್ಲಿಕಾರ್ಜುನಸ್ವಾಮಿ ಹಾಗೂ ಗಣಪತಿಗೂ ಪೂಜೆ ಸಲ್ಲುತ್ತದೆ. ಈ ಪೂಜೆ ಸಲ್ಲಿಸುವುದರಿಂದ ಸಂತಾನ, ಆರೋಗ್ಯ, ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೂ ಋಣಭಾದೆ, ಗೃಹಕಲಹ, ಅನಾರೋಗ್ಯ ನಿವಾರಣೆ ಆಗತ್ತದೆಂದು ಪುರೋಹಿತರು ತಿಳಿಸತ್ತಾರೆ. ಪ್ರತಿ ತಿಂಗಳಿನಲ್ಲೂ ಶುಕ್ಲ ಪಕ್ಷ ತ್ರಯೋದಶಿ ಹಾಗೂ ಕೃಷ್ಣ ಪಕ್ಷ ತ್ರಯೋದಶಿ ಗೆ ಪ್ರದೋಷ ಬರುತ್ತದೆ ಈ ಎರಡೂ ದಿನಗಳಲ್ಲಿ ಪೂಜೆ ನೆರವೇರಿಸಬಹುದು.ನಮ್ಮ ಶ್ರೀಶೈಲದ ಭೇಟಿಯಲ್ಲಿ ಈ ಪೂಜೆಯನ್ನೂ ನೆರವೇರಿಸೋಣ.