*ವಿದ್ಯುತ್ ಶಾರ್ಟ್: ಹುಲ್ಲಿನ ಬಣವೆಗೆ ಬೆಂಕಿ*
-ವರದಿ:  ಮಲ್ಲಿಕಾರ್ಜುನ ತುಂಗಳ ಮುಖ್ಯ ವರದಿಗಾರರು ಬಾಗಲಕೋಟೆ

 ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯುಟ್‌ನಿಂದ ಹೊತ್ತಿಕೊಂಡ ಬೆಂಕಿ, ಹತ್ತಿರದ ಹುಲ್ಲಿನ ಬಣವೆಗೆ ತಾಗಿ ಸಂಪೂರ್ಣ ಬಣವೆ ಸುಟ್ಟು ಹೋದ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ನಡೆದಿದೆ.

ಜಗದಾಳದ ನಾಮದೇವ ಉಪ್ಪಾರ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಸಮೀಪವಿದ್ದ ವಿದ್ಯುತ್ ಲೈನ್ ಹರಿದು ಬಿದ್ದ ಪರಿಣಾಮ ಗ್ರಾಮೀಣ ರಸ್ತೆಯ ಮಧ್ಯ ಭಾಗದಿಂದ ರಸ್ತೆಯ ಬದಿಯಿರುವ ಬಣವೆಗೆ ತಾಗಿದ ಪರಿಣಾಮ ಶಾರ್ಟ್ ಸರ್ಕ್ಯುಟ್ ಸಂಭವಿಸಿ ಸುಮಾರು ೧ ಲಕ್ಷ ರೂ. ಮೌಲ್ಯದ ೧೦ ಲೋಡ್‌ನಷ್ಟು ಬಣವೆ ಸುಟ್ಟು ಹೋಗಿದೆ. 

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ.
ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.

*ತಪ್ಪಿದ ಭಾರಿ ಅನಾಹುತ*

ದಿನಂಪ್ರತಿ ಚಿಮ್ಮಡ-ಜಗದಾಳ ಜಿಲ್ಲಾ ಹೆದ್ದಾರಿಯಿಂದ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಅದೃಷ್ಟವಶಾತ್ ಆ ಸಮಯದಲ್ಲಿ ಯಾವದೇ ವಾಹನಗಳು ಸಂಚಾರ ನಡೆಸಿಲ್ಲ. ವಿದ್ಯುತ್ ಶಾರ್ಟ್ನಿಂದ ಬೆಂಕಿ ಹತ್ತಿದ ಕೆಲ ಹೊತ್ತಿನಲ್ಲಿಯೇ ಗ್ರಾಮಸ್ಥರು ಅಗ್ನಿಶಾಮಕ ತಂಡದೊಂದಿಗೆ ಬೆಂಕಿ ನಂದಿಸುವ ಮೂಲಕ ಭಾರಿ ಅನಾಹುತ ತಡೆಯುವಲ್ಲಿ ಕಾರಣವಾಗಿದೆ.