ಬನಹಟ್ಟಿಯ ಮುಗತಿ ಗಲ್ಲಿಯಲ್ಲಿ ರಸ್ತೆ ಮಧ್ಯ ನೀರು ಚಿಮ್ಮುತ್ತಿರುವದು.

ರಬಕವಿಯ ಬ್ರಹ್ಮಾನಂದ ಮಠದ ಹತ್ತಿರ ಇರುವ ವಿಜಯ ಹೂಗಾರ ಎಂಬವರ ಮನೆಯಲ್ಲಿ ಕೊಳವೆ ಬಾವಿಯಿಂದ ನೀರು ಹೊರ ಬರುತ್ತಿರುವುದು.

ಭರಪೂರ ತುಂಬಿದ ಬಾವಿಗಳು
ಬತ್ತಿದ ಕೊಳವೆಬಾವಿಯಿಂದ ಜಲಧಾರೆ
ರಬಕವಿ-ಬನಹಟ್ಟಿ,ಅ13: ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲೂಕಿನ ಎಲ್ಲ ಬಾವಿಗಳು ತುಂಬಿಹೋಗಿವೆ.
ಕೆಲ ಪ್ರದೇಶಗಳಲ್ಲಿ ನೀರಿನ ತೇವಾಂಶದಿಂದ ಮನೆಗಳ ಗೋಡೆಗಳು ಹಸಿಯಾಗಿವೆ. ಬನಹಟ್ಟಿಯ ಮುಗತಿ ಗಲ್ಲಿಯ ಬಾವಿಯಲ್ಲಿ ನೀರಿನ ಪ್ರಮಾಣ ಭಾರಿ ತುಂಬಿರುವ ಕಾರಣ ಪಕ್ಕದ ಸಿಸಿ ರಸ್ತೆಯ ಮಧ್ಯದಿಂದ ನೀರು ಚಿಮ್ಮುತ್ತಿದ್ದು, ಕಳೆದೊಂದು ವಾರದಿಂದ ನೀರು ಒಂದೇ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ.
ರಬಕವಿಯ ಬ್ರಹ್ಮಾನಂದ ನಗರದ ವಿಜಯ ಹೂಗಾರ ಎಂಬವರ ಮನೆಯಲ್ಲಿರುವ ಹತ್ತು ವರ್ಷಗಳ ಹಿಂದೆ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೊಳವೆ ಬಾವಿಯಿಂದ ಅಪಾರ ಪ್ರಮಾಣದ ನೀರು ಹೊರ ಬರುತ್ತಿದೆ.
ಈ ಕೊಳವೆ ಬಾವಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಇದು ಯಾವುದೆ ಪ್ರಯೋಜನಕ್ಕೆ ಬರುವದಿಲ್ಲ ಅದನ್ನು ಮುಚ್ಚಲಾಗಿತ್ತು. ಆದರೆ  ಈ ಭಾಗದಲ್ಲಿ ಋತುವಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಂತರ್ಜಲ ಮಟ್ಟ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದ್ದು. ಕೊಳವೆ ಬಾವಿಯಿಂದ ನೀರು ಹೊರ ಬರುತ್ತಿದೆ. ಎರಡು ದಿನಗಳ ಹಿಂದೆ ಸ್ವಲ್ಪ ಪ್ರಮಾಣದ ನೀರು ಬರುತ್ತಿತ್ತು. ಆದರೆ ಸೋಮವಾರ ಸಂಜೆಯಿಂದ ಅಪಾರ ಪ್ರಮಾಣದ ನೀರು ಬರುತ್ತಿದೆ.