ನೇಕಾರರ ಶೇ.90 ರಷ್ಟು ಯೋಜನೆ ಜಾರಿಗೊಳಿಸಿದ್ದು ನಾನೇ-ಸವದಿ ರಬಕವಿ-ಬನಹಟ್ಟಿ,ಅ2:ರಾಜ್ಯದಲ್ಲಿ ಅತಿ ಹೆಚ್ಚು ನೇಕಾರಿಕೆ ಹೊಂದಿರುವ ಕ್ಷೇತ್ರ ತೇರದಾಳ. ಆ ಕ್ಷೇತ್ರದ ಶಾಸಕನಾಗಿ ನೇಕಾರರ ಶೇ.90 ರಷ್ಟು ಸರ್ಕಾರದ ಕಾರ್ಯ ಯೋಜನೆಗಳನ್ನು ತಲುಪಿಸುವಲ್ಲಿ ನೆಮ್ಮದಿ ಕಂಡಿದ್ದೇನೆ. ಯಾವದೇ ದಾಖಲೆಗಳಿಲ್ಲದೆ ಕೇವಲ ನೇಕಾರ ಸಮುದಾಯದ ಓಲೈಕೆಗೋಸ್ಕರ ನಾನೂ ಮಾಡಿದ್ದು ಎಂದು ಹೇಳುತ್ತ ವಿಪಕ್ಷಗಳು ಬೊಗಳೆ ಬಿಡುತ್ತಿರುವದು ನಿಜಕ್ಕೂ ಬೇಸರ ತರುವಂಥದ್ದಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಳೆದ 2008 ರಿಂದ ನೇಕಾರರಿಗೆ ಸಾಲಮನ್ನಾ ಯೋಜನೆಗೆ ಪ್ರಕ್ರಿಯೆ ನೀಡುವಲ್ಲಿ ಕಾರಣವಾಗಿತ್ತು. ಅಂದಿನಿಂದ ಮೂರು ಬಾರಿ ಸರ್ಕಾರದಿಂದ ಸಾಲ ಮನ್ನಾ ಮಾಡುವಲ್ಲಿ ಯಶಸ್ಸು ಕಂಡಿದ್ದೇನೆ. ವಿದ್ಯುತ್ ಸಬ್ಸಿಡಿಯನ್ನು 1.25 ರೂ.ಗೆ ಇಳಿಕೆ ಮಾಡುವ ಮೂಲಕ ನೇಕಾರರ ಉದ್ಯೋಗ ಸುಗಮವಾಗುವಲ್ಲಿ ಕಾರಣವಾಗಿದೆ. ಇದೀಗ 82 ಕೋಟಿ ರೂ.ಗಳಷ್ಟು ಸಾಲ ಮನ್ನಾಗೆ ಸಂಬಂಧ ಒಟ್ಟಾರೆ 56 ಕೋಟಿ ರೂ.ಗಳಷ್ಟು ಬಿಡುಗಡೆಗೊಂಡಿದ್ದು, ನಿನ್ನೆಯಷ್ಟೇ ರೂ. 31.21 ಕೋಟಿ ರೂ. ಜವಳಿ ಇಲಾಖೆಯ ಹಣಕಾಸು ವಿಭಾಗದಿಂದ ಬಿಡುಗಡೆಗೊಂಡಿದೆ. ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲಿ ಒತ್ತಾಯಿಸಿ ಸ್ವತಃ `ನೇಕಾರ ಸಮ್ಮಾನ ಯೋಜನೆ’ ನಾಮದಡಿ ನೇಕಾರ ಸಮುದಾಯಕ್ಕೆ ಪ್ರಯೋಜನ ಒದಗಿಸಬೇಕೆಂಬ ಒತ್ತಡ ಹೇರುವ ಮೂಲಕ ಸಂಕಷ್ಟದಲ್ಲಿರುವ ನೇಕಾರರಿಗೆ ತಲಾ 2 ಸಾವಿರ ರೂ.ಗಳಂತೆ ಬಿಡುಗಡೆಗೊಳಿಸಿದ್ದಲ್ಲದೆ ಇದನ್ನು 5 ಸಾವಿರ ರೂ.ಗೆ ಏರಿಕೆ ಮಾಡುವಂತೆಯೂ ಒತ್ತಾಯಿಸಲಾಗಿದೆ ಎಂದು ಸವದಿ ತಿಳಿಸಿದರು.
Social Plugin