* ದಿನಕ್ಕೆ ಅಂದಾಜು 8 ರಿಂದ 10 ಲಕ್ಷದ ವ್ಯವಹಾರ ಸ್ಥಗಿತ
ರಬಕವಿ-ಬನಹಟ್ಟಿ,ಅ18: ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮ ಎಲೆಗಳ ವ್ಯಾಪಾರದ ಕೇಂದ್ರ ಸ್ಥಾನ. ಸುತ್ತ ಮುತ್ತಲಿನ ಗ್ರಾಮದ ಜನರು ಬೆಳಗ್ಗೆ ನಾಲ್ಕು ಗಂಟೆಗೆ ಎಲೆಗಳನ್ನು ತರಲು ಆರಂಭಿಸುತ್ತಾರೆ. ಅಲ್ಲಿ ಬೆಳಗ್ಗೆಯೇ ಸೌದಾ ನಡೆಯುತ್ತಿದೆ.
ಕೊರೊನಾ ವೈರಸ್ ಹಾವಳಿಯಿಂದ ಎಲೆಗಳ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಎಲೆಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ. ಜಗದಾಳ ಪುಟ್ಟ ಗ್ರಾಮವಾದರೂ ಇಲ್ಲಿ ದಿನಕ್ಕೆ ಅಂದಾಜು ರೂ. 8 ರಿಂದ 10 ಲಕ್ಷವರೆಗೆ ಎಲೆಗಳ ವ್ಯಾಪಾರ ನಡೆಯುತ್ತದೆ. ಆದರೆ ಇದೀಗ ಕೊರೊನಾ ಮಹಾಮಾರಿ ಒಂದೆಡೆಯಾದರೆ, ಇದನ್ನೇ ಸಮಯವನ್ನಾಗಿಸಿಕೊಂಡು ಮಧ್ಯವರ್ತಿಗಳು ರೈತರಿಗೆ ದೊರಕಬೇಕಾದ ನ್ಯಾಯಯುತ ಬೆಲೆ ಸಿಗದಂತೆ ಮಾಡುತ್ತಿರುವದು ಮತ್ತೊಂದು ಸಮಸ್ಯೆಯಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ರಾಜ್ಯದಲ್ಲೆ ಅತಿ ಹೆಚ್ಚಿನ ವಿಳ್ಯೆದೆಲೆ ಬೆಳೆಗಾರರಿದ್ದು, ಅಂದಾಜು 800 ಎಕರೆ ಭೂಮಿಯಲ್ಲಿ ವಿಳ್ಯೆದೆಲೆ ಬೆಳೆಯಲಾಗುತ್ತದೆ. ಪ್ರತಿ ನಿತ್ಯ 1 ಎಕರೆಗೆ 2ರಿಂದ 3 ಡಾಗ್ (ಡಪ್ಪೆ) ವಿಳ್ಯೆದೆಲೆ ಪಡೆಯಬಹುದಾಗಿದ್ದು, 1 ಡಾಗ್(ಡಪ್ಪೆ)ಯಲ್ಲಿ ಸಾಮಾನ್ಯವಾಗಿ 12 ಸಾವಿರ ವಿಳ್ಯೆದೆಲೆ ಇರುತ್ತವೆ. ಸಂತಿ(ಲೋಕಲ್)ಎಲೆ, ಕಳ್ಳಿ ಎಲೆ, ಪಾಪಡ ಎಲೆ ಎಂದು ಇದರಲ್ಲಿ ಮೂರು ವಿಧಗಳಿವೆ. ಕಳ್ಳಿ ಎಲೆ ಮತ್ತು ಪಾಪಡ ಎಲೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತವೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಾಗೂ ಗುಜರಾತ್, ಪೂನಾ, ಸಾತಾರಾ, ಮುಂಬೈ, ಔರಂಗಾಬಾದ, ಜಾಲನಾ, ಬೀಡ, ನಾಸಿಕ, ಸಾವಂತವಾಡಿ, ಕಳಂಬಾ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆ ಜಗದಾಳದಿಂದ ಪ್ರತಿನಿತ್ಯ 150 ರಿಂದ 200 ಡಾಗ್(ಡಪ್ಪೆ)ಗಳು ಮಾರುಕಟ್ಟೆಗೆ ಹೋಗುತ್ತವೆ. ಈಗ ಎಲೆಗಳನ್ನು ಸ್ಥಳೀಯರು ಕೇಳುತ್ತಿಲ್ಲ. ಒಟ್ಟಿನಲ್ಲಿ ಎಲೆಗಳ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಎಲೆ ಬಳ್ಳಿಗಳನ್ನು ನಂಬಿದ ನೂರಾರು ಕೂಲಿ ಕಾರ್ಮಿಕರು ಕೂಲಿ ಇಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ರೈತರು ವ್ಯಾಪಾರ ಇಲ್ಲದೆ ತಲೆ ಮೇಲೆ ಕೈಹೊತ್ತು ಕೊಂಡಿದ್ದಾರೆ.
ಬೆಂಬಲವಿಲ್ಲದೆ ರೈತ ಕಂಗಾಲು: ಮಳೆಗಾಲದ ತಂಪು ವಾತಾವರಣ ಇದೀಗ ವಿಳ್ಯೆದೆಲೆ ರೈತರಿಗೆ ಮಾರಕವಾಗಿದೆ. 1200 ರೂ.ಗೆ ಒಂದು ಡಾಗ್(ಡಪ್ಪೆ) ಮಾರಾಟವಾಗುತ್ತಿತ್ತು. ಇದೀಗ ಕೊರೊನಾವನ್ನೇ ನೆಪವನ್ನಾಗಿಸಿಕೊಂಡು 200 ರೂ.ಗೆ ಒಂದು ಡಾಗ್ನಂತೆ ಮಾರಾಟ ಮಾಡುವ ಮೂಲಕ ಬೆಲೆ ಪಾತಾಳಕ್ಕಿಳಿದಿದೆ. ಇದರಲ್ಲಿ 70 ರಿಂದ 80 ರೂ. ಬಳ್ಳಿಯಲ್ಲಿನ ಎಲೆ ಕೊಯ್ಯಲು ಹಾಗು ಡಾಗ್ ಕಟ್ಟಲು ಖರ್ಚಾಗುವದು. ಉಳಿದ 100 ರಿಂದ 120 ರೂ. ರೈತರ ಕೈ ಸೇರುತ್ತಿದೆ. ಹೀಗಾಗಿ ರೈತ ಬೆಳೆದ ವಿಳ್ಯೆದೆಲೆಯನ್ನು ಕಟಾವು ಮಾಡದೆ ಭೂಮಿಯಲ್ಲಿ ಹಾಗೇ ಉಳಿಯುವಲ್ಲಿ ಕಾರಣವಾಗಿದ್ದು, ಬೆಳೆದ ಬೆಳೆ ಹಾಗೆ ಭೂಮಿಯಲ್ಲಿ ಗೊಬ್ಬರಾಗುವ ಭೀತಿ ಎದುರಾಗುತ್ತಿದೆ.
ಸಾಲ-ಶೂಲ ಮಾಡಿ ಇದೇ ವಿಳ್ಯೆದೆಲೆಯನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಬ್ಯಾಂಕ್ಗಳಲ್ಲಿ ಪಡೆದ ಸಾಲ ಮರುಪಾವತಿಸಲಾಗದೆ ತೀವ್ರ ತತ್ತರಿಸಿ ಹೋಗಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಸ್ಥಿಕೆ ವಹಿಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಮಾರುಕಟ್ಟೆಯಲ್ಲಿ ಪ್ರಾಮಾಣಿಕ ಬೆಲೆ ಒದಗಿಸುವಲ್ಲಿ ಸಹಕಾರಿಯಾಗಬೇಕೆಂದು ಸ್ಥಳೀಯ ರೈತರ ಒತ್ತಾಯವಾಗಿದೆ.
ಮಧ್ಯವರ್ತಿಗಳ ಹಾವಳಿಯಿಂದ ವಿಳ್ಯೆದೆಲೆಗೆ ಪ್ರಾಮಾಣಿಕ ಬೆಲೆ ದೊರಕದ ಕಾರಣ ಬೆಳೆದ ರೈತ ತೀವ್ರ ಕಂಗಾಲಾಗಿದ್ದಾನೆ.’---ಗುರಲಿಂಗಪ್ಪ ಚಿಂಚಲಿ, ರೈತ.
`ವಿಳ್ಯೆದೆಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳಿಗೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸುಲಭ ಮಾರಾಟಕ್ಕೆ ಮಾರುಕಟ್ಟೆ ರಫ್ತಿಗೆ ಸಹಕಾರಿಯಾಗಬೇಕು.’----ಶ್ರೀಶೈಲ ಜನವಾಡ, ಯುವ ರೈತ.
ಜಾಹಿರಾತು...
Social Plugin