ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ ವಿಳಂಬದಿಂದಾಗಿ ಅಧಿಕಾರಿಗಳನ್ನು ಒತ್ತಾಯಿಸುತ್ತಿರುವ ರೈತರು.
ವಿಳಂಬವಾಗುತ್ತಿರುವ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ
*ತ್ರಿಶಂಕು ಸ್ಥಿತಿಯಲ್ಲಿ ರೈತರು *ಇನ್ನೂ ನಡೆಯದ ಭೂಸ್ವಾಧೀನ ಕ್ರಿಯೆ
ರಬಕವಿ-ಬನಹಟ್ಟಿ,ಜು30: ಮಾರ್ಚ್, 2018 ರಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದ ಮಹತ್ವದ ಏತ ನೀರಾವರಿಯಲ್ಲಿ ಒಂದಾಗಿರುವ ಕುಲಹಳ್ಳಿ-ಹುನ್ನೂರ ಏತ ನೀರಾವರಿಗೆ ಸಂಬಂಧ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನಲೆ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಕರ್ನಾಟಕ ನೀರಾವರಿ ಇಲಾಖೆಯ ಘಟಪ್ರಭಾ ಎಡದಂಡೆ ಕಾಲುವೆಗೆ ಸಂಬಂಧ ಕುಲಹಳ್ಳಿಯ ಕೃಷ್ಣಾ ನದಿಯಿಂದ ಹುನ್ನೂರ ರಸ್ತೆಗಿರುವ ಕೆನಾಲ್ವರೆಗೆ ಒಟ್ಟು 7.2 ಕಿ.ಮೀ.ನಷ್ಟು ಉದ್ದವಾಗಿ 73 ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಸಹ್ಯಾದ್ರಿ ಕನ್ಸ್ಟ್ರಕ್ಷನ್ಸ್ ಕಂಪನಿ ಕಾರ್ಯ ನಿಭಾಯಿಸುತ್ತಿದೆ. ನೀರು ಸಂಗ್ರಹಕ್ಕೆ ಬೇಕಾದ ಕಾರ್ಯ ಮುಕ್ತಾಯಗೊಂಡಿದ್ದು, ಇದೀಗ ಪೈಪ್ಲೈನ್ ಅಳವಡಿಕೆ ಗಗನಕುಸುಮವಾಗಿದ್ದು, ಕಳೆದ ಏಳೆಂಟು ತಿಂಗಳಿಂದ ಯಾವದೇ ರೀತಿ ಕಾಮಗಾರಿ ನಡೆಯದೆ ಇರುವದು ದುರದೃಷ್ಟಕರ ಸಂಗತಿಯಾಗಿದೆ. 31 ಎಕರೆಯಷ್ಟು ಭೂಮಿಯನ್ನು ಭುಸ್ವಾಧೀನಪಡಿಸಿಕೊಳ್ಳುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.
ಈ ಯೋಜನೆಯಿಂದ 9163 ಹೆಕ್ಟೇರ್ ಭೂಮಿಗೆ ವರವಾಗಲಿದೆ. ಈ ಭಾಗದ ಮುಂಗಾರಿನ ಬೆಳೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆನಾಲ್ಗೆ ಕೃಷ್ಣೆಯಿಂದ ನೀರು ಎತ್ತುವ ಕಾರ್ಯ ಮಹತ್ವದ್ದಾಗಿದೆ. ಆದರೆ ವಿಳಂಬ ನೀತಿಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಲು ಕಾರಣವಾಗಿದೆ.
ಧಕ್ಕದ ಪರಿಹಾರ: ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವದರಿಂದ ಸುಮಾರು 75 ರಿಂದ 80 ಜನ ರೈತರ ಭೂಮಿಯಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯ ನಡೆಯಲಿದೆ. ಸದ್ಯ ಎಷ್ಟು ಪ್ರದೇಶವನ್ನು ಆಯಾ ರೈತರ ಭೂಮಿಯಲ್ಲಿನ ಪ್ರದೇಶ ಆವರಿಸಿಕೊಳ್ಳಲಿದ್ದಾರೆಂಬ ನಿಖರತೆಯಿರದ ಕಾರಣ ಬೆಳೆ ಬೆಳೆಯಲೂ ಸಮಸ್ಯೆ ಎದುರಿಸುತ್ತಿದ್ದಾರೆ.
`ಸರ್ಕಾರದಿಂದ ಭೂಸ್ವಾಧೀನ ಕ್ರಿಯೆ ನಡೆಯಬೇಕಿದ್ದು, ನಂತರ ಪೈಪ್ಲೈನ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇದೆ. ಮೂರ್ನಾಲ್ಕು ತಿಂಗಳಲ್ಲಿ ಈ ಕಾರ್ಯ ಸಂಪೂರ್ಣಗೊಳಿಸಲಾಗುವದು’.----ಪಿ.ಎಸ್. ಕುಲಕರ್ಣಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ನೀರಾವರಿ ಇಲಾಖೆ ಜಮಖಂಡಿ.
`ಕಾಮಗಾರಿ ವಿಳಂಬದಿಂದಾಗಿ ರೈತರು ತೀವ್ರ ಸಮಸ್ಯೆ ಎದುರಿಸುವಲ್ಲಿ ಕಾರಣವಾಗಿದೆ. ಒಂದೆಡೆ ಭೂಮಿ ಸ್ವಾಧೀನಪಡಿಸಿಕೊಂಡ ರೈತರ ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ಮುಂಗಾರಿನ ಬೆಳೆ ಅನುಕೂಲಕ್ಕಾಗಿ ನೀರು ಹರಿಸುವದು ಯಾವಾಗ ಎಂಬ ಪ್ರಶ್ನೆ ಮತ್ತೇ ಉಳಿದ ರೈತರದ್ದಾಗಿದೆ. ಬೇಗನೆ ಕಾಮಗಾರಿ ಪೂರ್ಣಗೊಳಿಸಲಿ.’----ಪ್ರಶಾಂತ ಕೊಳಕಿ, ಯುವ ರೈತ, ಬನಹಟ್ಟಿ.

Social Plugin