ರಬಕವಿಯಲ್ಲಿ ನಿರ್ಗತಿಕ ಹಾಗು ಬಡಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದರು.

ಯಾರೂ ಉಪವಾಸದಿಂದ ಇರಬಾರದು-ಸವದಿ
ರಬಕವಿ-ಬನಹಟ್ಟಿ,ಏ20: ಇಡೀ ದೇಶವೇ ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದೆ. ಕಡುಬಡವರಿಗೆ ಆಗುತ್ತಿರುವ ಸಮಸ್ಯೆ ಅರಿವಾಗುತ್ತಿದೆ. ಯಾರೂ ಉಪವಾಸದಿಂದ ಇರಬಾರದೆಂಬ ಉದ್ದೇಶದಿಂದ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿರ್ಗತಿಕ ಹಾಗು ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಆಹಾರ ಪೊಟ್ಟಣ ಒದಗಿಸಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯ ಹರಿಜನಕೇರಿಯ ಬಡತನದಲ್ಲಿ ಬೆಂದಿರುವ ಕುಟುಂಬಗಳಿಗೆ ಆಹಾರ ಧಾನ್ಯ ಪೊಟ್ಟಣ ವಿತರಿಸಿ ಅವರು ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗ ಕಸಿದುಕೊಂಡಿರುವ ಕೊರೊನಾ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೂ ಎದೆಗುಂದದೆ ಸವಾಲು ಎದುರಿಸಬೇಕೆಂದರು.
ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊಡಗೈ ದಾನಿಗಳು ಸಕಲ ರೀತಿಯಲ್ಲಿ ಉಪಚಾರ ಮಾಡುತ್ತಿದ್ದು, ತಾಲೂಕಾಡಳಿತ, ನಗರಸಭೆ ಹಾಗು ಪೊಲೀಸರೊಂದಿಗೆ ಪೂರಕ ಸಹಕಾರ ನೀಡುತ್ತ ಕೊರೊನಾ ವೈರಸ್‍ನ ಕರಿನೆರಳು ಬೀಳದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದೇ ರೀತಿಯ ಸಹಕಾರ ಇನ್ನೆರಡು ವಾರವಿದ್ದರೆ ಸಂಪೂರ್ಣ ಸಮಸ್ಯೆ ದೂರಾಗುವದೆಂದು ಸವದಿ ತಿಳಿಸಿದರು.
ಇದೇ ಸಂದರ್ಭ ಧರೆಪ್ಪ ಉಳ್ಳಾಗಡ್ಡಿ, ಯೂನಸ್ ಚೌಗಲಾ, ಕಲಾಲ, ಬಾಬು ನಡುವಿನಮನಿ ಇದ್ದರು.

ಕೃಪೆ : ಚಂದೂ. ತುಂಗಳ.