ಮತ್ತೊಂದು ಗೀತೆಗೆ ನವೀನ್ ಸಜ್ಜು ಗಾಯನ
ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಯತಿರಾಜ್ ನಿರ್ದೇಶಿಸಿರುವ "ಸಂಜು" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
ಪ್ರೀತಿ ಮತ್ತು ಭಾವನೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಯತಿರಾಜ್ ಅವರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ.
ವಿಜಯ್ ಹರಿತ್ಸ ಸಂಗೀತ ನಿರ್ದೇಶಿಸಿರುವ ಎರಡು ಹಾಡುಗಳು ಈ ಚಿತ್ರದಲ್ಲಿದ್ದು, ಎರಡೂ ಹಾಡುಗಳನ್ನು ಆಕಾಶ್ ಹಾಸನ್ ಬರೆದಿದ್ದಾರೆ. ಡ್ಯುಯೆಟ್ ಹಾಡನ್ನು ಖ್ಯಾತ ಗಾಯಕ ವಾಸುಕಿ ವೈಭವ್ ಹಾಗೂ ಗಾಯಕಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಮತ್ತೊಂದು ವಿಭಿನ್ನ ಶೈಲಿಯ ಗೀತೆಯನ್ನು ಹೆಸರಾಂತ ಗಾಯಕ ನವೀನ್ ಸಜ್ಜು ಹಾಡಿದ್ದಾರೆ. ಈ ಎರಡು ಹಾಡುಗಳನ್ನು ರೇಣು ಸ್ಟುಡಿಯೋ ಹಾಗೂ ಪಾರೇಕ್ ಸ್ಟುಡಿಯೋದಲ್ಲಿ ಇತ್ತೀಚೆಗೆ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ ಎಂದು ಗಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ಮನ್ವಿತ್ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಶ್ರಾವ್ಯ ನಾಯಕಿಯಾಗಿದ್ದಾರೆ. ಯತಿರಾಜ್, ಸುಂದರಶ್ರೀ, ಬಾಲ ರಾಜ್ವಾಡಿ, ಮಹಂತೇಶ್, ಅಪೂರ್ವ, ಚಂದ್ರಪ್ರಭ, ಪ್ರಕಾಶ್ ಶೆಣೈ, ವಿನೋದ್, ಬೌ ಬೌ ಜಯರಾಂ, ಬೇಬಿಶ್ರೀ, ರಾಜೇಗೌಡ, ನಾಗರತ್ನ, ಚೇತನ್, ಕುರಿ ರಂಗ, ಕಾತ್ಯಾಯಿನಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಮಡಿಕೇರಿಯ ಮೂರ್ನಾಡು ಎಂಬ ಅದ್ಭುತ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ. ಅಲ್ಲಿ ಬಸ್ ನಿಲ್ದಾಣದ ಸೆಟ್ ಸಹ ಹಾಕಲಾಗಿತ್ತು. ಈ ಬಸ್ ನಿಲ್ದಾಣ ಚಿತ್ರದಲ್ಲಿ ಪ್ರಮುಖಪಾತ್ರ ವಹಿಸಿದೆ. ಶೀಘ್ರದಲ್ಲೇ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಯತಿರಾಜ್ ತಿಳಿಸಿದ್ದಾರೆ.

Social Plugin