ಶ್ರೀಗಳು ಕಣದಿಂದ ಹಿಂದೆ ಸರಿಯಲು ಬೆದರಿಕೆ ಕಾರಣ-ಅಂಬಲಿ

ನೇಕಾರರಿಗೆ ಕೊನೆಗೂ ದೊರಕದ ನ್ಯಾಯ ಬೇಸರವಾಗಿದೆ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಿಂದ ನೇಕಾರ ಸಮುದಾಯಕ್ಕೆ ಬಿಜೆಪಿ ಟಿಕೆಟ್ ದೊರಕದ ಕಾರಣ ತೀವ್ರ ಬೇಸರವಾಗಿದೆಯೆಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ತಿಳಿಸಿದರು.

ಬನಹಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೇಕಾರರ ಬೆಂಬಲವಾಗಿ ಹಳೇಹುಬ್ಬಳ್ಳಿಯ ವೀರಭಿಕ್ಷಾವ್ರತಿ ಮಠದ ಶಿವಶಂಕರ ಶ್ರೀಗಳು ಅಖಾಡದಿಂದ ಹಿಂದೆ ಸರಿದಿರುವಲ್ಲಿ ಪಿತೂರಿ ನಡೆದಿದೆ. 
ಹಲವಾರು ಪ್ರಭಾವಿಗಳಿಂದ ನಾಮಪತ್ರ ಹಿಂಪಡೆಯಲು ಒತ್ತಡ ಹೇರಿದರೆ ಕೆಲವರ ಪಿತೂರಿಯಿಂದ ಶ್ರೀಗಳು ಬೇಸರಗೊಂಡು ಹಿಂಪಡೆಯಲು ಕಾರಣವಾಗಿದೆ ಎಂದು ಅಂಬಲಿ ಗಂಭೀರವಾಗಿ ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ಬೆಳಗಾವಿಯಲ್ಲಿಯಾದರೂ ನೇಕಾರ ಸಮುದಾಯಕ್ಕೆ ಅವಕಾಶ ಕಲ್ಪಿಸಿದೆ. ಬಿಜೆಪಿಯಿಂದ ಯಾವದೇ ಕ್ಷೇತ್ರದಲ್ಲಿ ಮಣೆ ಹಾಕದಿರುವದು ತೀವ್ರ ಬೇಸರ ತರುವಂಥದ್ದು ಎಂದರು.
ಬಿಜೆಪಿಯಲ್ಲಿ ಸಕ್ರಿಯ
 ಯಾವದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೊರ ಹೋಗುವದಿಲ್ಲ. ಪಕ್ಷದ ಉಪಾಧ್ಯಕ್ಷನಾಗಿಯೇ ಮುಂದುವರೆಯುತ್ತೇನೆ. ಸದ್ಯದ ಪರಿಸ್ಥಿತಿಯ ಚುನಾವಣೆಯಲ್ಲಿ ತಟಸ್ಥನಾಗಿದ್ದು, ಅಭ್ಯರ್ಥಿ ಸಿದ್ದು ಸವದಿ ಪರ ಪ್ರಚಾರ ನಡೆಸಲ್ಲವೆಂದು ಸ್ಪಷ್ಟಪಡಿಸಿದರು.

3 ಕ್ಷೇತ್ರಗಳಲ್ಲಿ ಟಿಕೆಟ್ ಮಾರಾಟ
ತೇರದಾಳ ಸೇರಿದಂತೆ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಮಾರಾಟವಾಗಿದೆ ಎಂದು ಸ್ವಪಕ್ಷದ ಮುಖಂಡ ರಾಜೇಂದ್ರ ಅಂಬಲಿ ಆರೋಪಿಸಿರುವದು ಮುಜುಗರಕ್ಕೆ ಕಾರಣವಾಯಿತು.
ಪ್ರಾಮಾಣಿಕ ಕಾರ್ಯಕರ್ತರಿಗೆ ಹಾಗು ಬಹುಸಂಖ್ಯಾತ ನೇಕಾರ ಸಮುದಾಯಕ್ಕೆ ಈ ಬಾರಿ ಅನ್ಯಾಯವಾಗಿರುವದನ್ನು ಖಂಡಿಸುತ್ತೇನೆಂದರು.