"ಕಾಣೆಯಾಗಿದ್ದಾಳೆ" ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಸದ್ಯದಲ್ಲೇ ಬಿಡುಗಡೆ.
ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ  
"ಕಾಣೆಯಾಗಿದ್ದಾಳೆ" ಹುಡುಕಿಕೊಟ್ಟವರಿಗೆ ಬಹುಮಾನ ಚತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೊಂದು ನೈಜ ಹಾಗೂ ಕಾಲ್ಪನಿಕ ಕಥಾ ಆಧಾರಿತ ಚಿತ್ರ. ಐ.ಎ.ಎಸ್ ಆಗಬೇಕೆಂಬ ಆಸೆಹೊತ್ತ ಹಳ್ಳಿ ಹೆಣ್ಣುಮಗಳೊಬ್ಬಳು ನಗರಕ್ಕೆ ಬರುತ್ತಾಳೆ. ಆನಂತರ ಆಕೆಯ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದೆ ಕಥಾ ಹಂದರ. ವಿನಯ್ ಕಾರ್ತಿ ಈ ಚಿತ್ರದ ನಾಯಕ. ಕೀರ್ತಿ ಭಟ್ ನಾಯಕಿ. ಕೀರ್ತಿ ತೆಲುಗಿನ ಬಿಗ್ ಬಾಸ್ ನಲ್ಲಿ ಎರಡನೇ ಬಹುಮಾನ ಪಡೆದಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಅವರ ಬಗ್ಗೆ ಮಾಹಿತಿ ನೀಡುತ್ತೇನೆ. ನನ್ನ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಈಗ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುತ್ತೇವೆ. ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದರು ನಿರ್ದೇಶಕ ಆರ್.ಕೆ.
ಇದು ನನ್ನ ಮೊದಲ ಚಿತ್ರ. ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕ ವಿನಯ್ ಕಾರ್ತಿ ತಿಳಿಸಿದರು.
ಹಳ್ಳಿಯಿಂದ ನಗರಕ್ಕೆ ಬಂದ ಹುಡುಗಿಯ ಪಾತ್ರ ನನ್ನದು. ನಿರ್ದೇಶಕರು ಕಥೆ ತುಂಬಾ ಚೆನ್ನಾಗಿ ಮಾಡಿದ್ದಾರೆ. ಚಿತ್ರ ನೋಡಿ ಹಾರೈಸಿ ಎಂದರು ನಾಯಕಿ ಕೀರ್ತಿ ಭಟ್.
ಸಂಗೀತ ನಿರ್ದೇಶಕ ಕೌಶಿಕ್, ಸಂಕಲನಕಾರ ಶಿವರಾಜ್ ಮೇಹು ಹಾಗೂ ಚಿತ್ರದಲ್ಲಿ ನಟಿಸಿರುವ ಅಂಜನ, ಶಿವಕುಮಾರ್ ‌ಮುಂತಾದವರು ಚಿತ್ರದ ಕುರಿತು ಮಾತನಾಡಿದರು.