ರವಿವಾರ ಇಂದು ಬನಹಟ್ಟಿಗೆ ಸಿಎಂ ಬೊಮ್ಮಾಯಿ
ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಮುಖ್ಯಮಂತ್ರಿಗಳ ಸಾರ್ವಜನಿಕ ಸಭೆಗಾಗಿ ಸಜ್ಜುಗೊಂಡ ವೇದಿಕೆಯ ಹಾಗೂ ಇನ್ನೀತರ ಕಾರ್ಯಗಳನ್ನು ಶಾಸಕ ಸಿದ್ದು ಸವದಿ ವೀಕ್ಷಣೆ ಮಾಡಿದರು
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬನಹಟ್ಟಿ ಸಜ್ಜು
 ಇದೇ 26 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬನಹಟ್ಟಿಗೆ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ತೇರದಾಳ ಮತಕ್ಷೇತ್ರದ ಜನರು ಕಾತುರದಿಂದ ಕಾಯುತ್ತಿದ್ದಾರೆ. ಮುಖ್ಯಮಂತ್ರಿಗಳಾದ ನಂತರ ಇದೇ ಪ್ರಥಮ ಬಾರಿಗೆ ಬಸವರಾಜ ಬೊಮ್ಮಾಯಿ ಬನಹಟ್ಟಿಗೆ ಆಗಮಿಸುತ್ತಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶನಿವಾರ ಇಲ್ಲಿನ ಎಸ್‌ಆರ್‌ಎ ಮೈದಾನದಲ್ಲಿ ನಿರ್ಮಾಣ ಮಾಡಲಾದ ಬೃಹತ್ ಶಾಮೀಯಾನ್ ವೀಕ್ಷಣೆ ಮಾಡಿ ಮಾತನಾಡಿದರು. ಮುಖ್ಯಮಂತ್ರಿಗಳು ಬನಹಟ್ಟಿಗೆ ಆಗಮಿಸಿದ ನಂತರ ತಮ್ಮ ಮನೆ ದೇವರಾದ ಹಿಪ್ಪರಗಿಯ ಸಂಗಮೇಶ್ವರ ಮಠಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ. ನಂತರ ರೂ. 1.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ, ನಂತರ ಬಂಡಿಗಣಿ ಗ್ರಾಮದಲ್ಲಿಯ ಮಠದ ಭೂಮಿಪೂಜೆ, ಬನಹಟ್ಟಿಯ ದೇವರದಾಸಿಮಯ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಕೂಡಾ ದರ್ಶನ ಪಡೆದುಕೊಂಡು ಎಸ್‌ಆರ್‌ಎ ಮೈದಾನದಲ್ಲಿ ಸಸಾಲಟ್ಟಿ ಏತ ನೀರಾವರಿ ಹಂತ 1 ಹಂತ 2 ಕಾಮಗಾರಿಯ ಭೂಮಿಪೂಜೆ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಮುಂಗಡಪತ್ರ ಜನಪರ, ಸರ್ವವ್ಯಾಪ್ತಿ ಮತ್ತು ಸರ್ವವ್ಯಾಪಿ ಬಜೆಟ್ ಆಗಿದೆ. ಹಲವಾರು ನಿಗಮಗಳನ್ನು ಜಾರಿಗೆ ತಂದಿದ್ದು, ಇದರಿಂದಲೂ ಕೂಡಾ ಜನರು ಸಂತೋಷಪಟ್ಟಿದ್ದಾರೆ. ರಾಜ್ಯದಲ್ಲಿ ಮತ್ತು ತೇರದಾಳ ಮತಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಹುಮತ ಪಡೆದುಕೊಳ್ಳಲಿದೆ. 
ಕ್ಷೇತ್ರದ ಪ್ರತಿಯೊಂದು ವಾರ್ಡ್ ನಲ್ಲಿ ಶೇ. 90 ರಷ್ಟು ಕಾರ್ಯಗಳು ಮುಕ್ತಾಯಗೊಂಡಿವೆ. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ 25 ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ಶಾಸಕ ಸವದಿ ತಿಳಿಸಿದರು.
ಬಿಜೆಪಿ ಮುಖಂಡರಾದ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಆನಂದ ಕಂಪು, ಲಕ್ಕಪ್ಪ ಪಾಟೀಲ, ವರ್ಧಮಾನ ಕೋರಿ ಇದ್ದರು.