ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ.
ತೇರದಾಳ : ನೂತನ ಸಮವಸರಣದಲ್ಲಿ ಶ್ರೀ1008 ನೇಮಿನಾಥ ತೀರ್ಥಂಕರ ರತ್ನಮಯ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ಜೀರ್ಣೋದ್ಧಾರ ಶಿಖರದಲ್ಲಿ ಅನಂತನಾಥ ತೀರ್ಥಂಕರರ ಜಿನಬಿಂಬ ವೇದಿಪ್ರತಿಷ್ಠಾ ಮಹೋತ್ಸವವು ಪಟ್ಟಣದ ಗುರುಕುಲ ಆವರಣದಲ್ಲಿ ಡಿ.10ರಿಂದ ಪ್ರಾರಂಭಗೊಂಡು ಡಿ.14ರ ವರೆಗೆ ನಡೆಯಲಿದೆ ಎಂದು ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಹೇಳಿದರು.
ಗುರುಕುಲ ಆವರಣದ ವೈದ್ಯಕೀಯ ಮಹಾವಿದ್ಯಾಲಯದ ಸಭಾವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಿ.10ರಂದು ಶುಕ್ರವಾರ ಮುಂಜಾನೆ ಮಂದಿರ ಹಾಗೂ ಮಂಟಪದ ಮುಂದೆ ಧ್ವಜಾರೋಹಣ, ಯಜಮಾನರ ಆನೆಮೇಲಿಂದ ಮೆರವಣಿಗೆ, ಪೀಠ ಯಂತ್ರ ಆರಾಧನೆ, ಮಂಗಲ ಕುಂಭದಿಂದ ಭಗವಾನರಿಗೆ ಅಭಿಷೇಕ ಮಹಾಶಾಂತಿಧಾರೆ, ಗರ್ಭಕಲ್ಯಾಣ ವಿಧಾನ ಮಂಡಲ ಆರಾಧನೆ ನವಗ್ರಹ ಹೋಮ ವಾಸ್ತು ವಿಧಾನ ಚತುಃದಿಕ್ಷು ಹೋಮ ಧಾಮನಸಂಪ್ರೋಕ್ಷಣ. ಮಧ್ಯಾಹ್ನ ಮುನಿಗಳ ಆಗಮನ, ಪ್ರವಚನ ವ್ಯಾಖ್ಯಾನ, ಸವಾಲ.
ದಿ.11ರಂದು ಭಗವಂತರ ಜನ್ಮಕಲ್ಯಾಣ ಮಹೋತ್ಸವ, ಮಂಗಲಕುಂಭ ತರುವುದು. ರಾತ್ರಿ ನಾಮಕರಣ, ಬಾಲಲೀಲಾ ಕುಮಾರಕ್ರೀಡಾ. ದಿ.12ರಂದು 56ದೇಶದ ರಾಜರ ಭವ್ಯ ಮೆರವಣಿಗೆ, ದಿ.13ರಂದು 500 ಮಕ್ಕಳ ಮೌಂಜಿಬಂಧನ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಶ್ರೀವಿಹಾರ ರಥೋತ್ಸವ ಭವ್ಯ ಮೆರವಣಿಗೆ. ದಿ.14ರಂದು ಧ್ವಜಾ ಅವರೋಹಣ, ಉಪನ್ಯಾಸ ಹಾಗೂ ಸಾಧಕರಿಗೆ ಸತ್ಕಾರ ಕಾರ್ಯಕ್ರಮಗಳು ಜರುಗುವವು. ಕಂಕಣ ವಿಮೂಚನ, ಆರತಿ ವಿಸರ್ಜನೆ ನೆರವೇರುವುದು.
ದಿನಾಲು ಮಧ್ಯಾನ ಪ್ರವಚನ ವ್ಯಾಖ್ಯಾನ, ಸವಾಲ. ದಿನಾಲು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ನಡೆಸಲಾಗುವುದು. ಈ ಪಂಚಕಲ್ಯಾಣ ಮಹೋತ್ಸದಲ್ಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಚಿವರು ಮಾಜಿ ಸಚಿವರು, ಶಾಸಕರು ಸೇರಿದಂತೆ ವರೂರ, ಸೌಂದಾ, ಎನ್ಆರ್ಪುರ, ಧರ್ಮಸ್ಥಳ, ಮೂಡಬಿದರೆ, ಶ್ರವಣಬೆಳಗೋಳ, ಕಂಬದ ಹಳ್ಳದಿಂದ ಜಿನಮುನಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಆಗಮಿಸಲಿದ್ದಾರೆ. ಹಾಗೂ ತೇರದಾಳ ಸುತ್ತಮುತ್ತಲಿನ ಶ್ರಾವಕ ಶ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂರ್ದಭದಲ್ಲಿ ಪ್ರವೀಣ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಕೊಕಟನೂರ, ಅಶೋಕ ಅಳಗೊಂಡ, ಡಾ.ಜೆ.ಬಿ.ಆಲಗೂರ, ಮಲ್ಲಿನಾಥ ಬೋಳಗೊಂಡ, ಶೀತಲ ಗೂಳನ್ನವರ, ಸುಭಾಸ ಮಗದುಮ್ಮ ಸೇರಿದಂತೆ ಗೋಂಕ ಜಿನಾಲಯ, ದಿಗಂಬರ ಜೈನ ಮಂದಿರ ಹಾಗೂ ಟ್ರಸ್ಟ್ ಕಮೀಟಿ, ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Social Plugin