ತೇರದಾಳ ಸಮೀಪದ ಕಾಲತಿಪ್ಪಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯರಿಂದ ಶಿಕ್ಷಕರಿಗೆ ಗುರುವಂದನಾ ಸಮಾರಂಭ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.
ಕಾಲತಿಪ್ಪಿಯಲ್ಲಿ ಜನಪ್ರತಿನಿಧಿಗಳಿಂದ ಗುರುವಂದನಾ ಸಮಾರಂಭ
ಶಾಲೆ ದೇವಾಲಯವಾದರೆ-ಶಿಕ್ಷಕ ದೇವರು : ಬಿಇಓ, ಸಿ.ಎಂ ನ್ಯಾಮಗೌಡ
ತೇರದಾಳ : ವಿಶ್ವದ ಪ್ರತಿಯೊಂದು ರಾಷ್ಟ್ರಗಳಲ್ಲಿ ಮೌಲ್ಯಗಳು ವಿಭಿನ್ನವಾಗಿರಲು ಆಯಾ ದೇಶದ ಜನರು ಶಿಕ್ಷಣ ಕುರಿತು ಹೊಂದಿರು ಧೋರಣೆಗಳನ್ನು ಆಧರಿಸಿದ್ದು ನಮ್ಮ ದೇಶದಲ್ಲಿ ಶಾಲೆಗಳನ್ನು ದೇವಾಲಯಗಳೆಂದು ಆರಾಧಿಸುತ್ತಿರುವುದರಿಂದಲೇ ಇಂದು ನಮ್ಮ ಭಾರತ ದೇಶ ಇಡಿ ವಿಶ್ವಕ್ಕೆ ವಿಶ್ವಗುರುವಾಗಿರುವುದು ಹೆಮ್ಮೆಯ ಸಂಗತಿಯಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಬಣ್ಣಿಸಿದರು.
ಸಮೀಪದ ಕಾಲತಿಪ್ಪಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರ ನೇತ್ರತ್ವದಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷರ ಕಲಿಸುವ ಗುರುಗಳಿಗೆ ಗುರುವಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶಾಲೆಯನ್ನು ದೇವಾಲಯ ಹಾಗೂ ವಿದ್ಯಾ ದಾಸೋಹಗೈಯುತ್ತಿರುವ ಶಿಕ್ಷಕರನ್ನು ದೇವರಂತೆ ಕಂಡಾಗ ಮಾತ್ರ ಮೌಲ್ಯಗಳು ಜೀವಂತವಾಗಿರಲು ಸಾಧ್ಯ ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ಅಗಾಧವಾದ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದು ಪ್ರತಿ ಶಿಕ್ಷಕನ ಕರ್ತವ್ಯ ಹಾಗೂ ಅಂತಹ ಶಿಕ್ಷಕರನ್ನು ಸಮಾಜ ಹಾಗೂ ಅಲ್ಲಿನ ಜನಪ್ರತಿನಿಧಿಗಳು ಬೆಂಬಲಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಲ್ಲಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಎಸ್.ಆರ್.ಮರೇಗುದ್ದಿ, ಶಿಕ್ಷಕ ಸದಾ ಗೌರವಿಸಬೇಕಾದ ವ್ಯಕ್ತಿ. ಅದು ಆತನ ನಡೆ-ನುಡಿಯಿಂದ ಮತ್ತಷ್ಟು ಹೆಚ್ಚಾಗಬೇಕು. ದೇಶ ಕಟ್ಟುವ ಶಿಕ್ಷಕನ ಬೆನ್ನು ತಟ್ಟುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತಿರುವುದು ಗ್ರಾಮದ ಐಕ್ಯತೆಯ ಪ್ರತೀಕ ಎಂದರು. ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ರವೀಂದ್ರ ಸಂಪಗಾಂವ, ಶಿಕ್ಷಣಸಂಯೋಜಕ ಶ್ರೀಶೈಲ್ ಬುರ್ಲಿ, ಸಿಆರ್ಪಿ ಭರತೇಶ ಯಲ್ಲಟ್ಟಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯ ಶಂಕರ ಉಗಾರ ಒಂದು ದೇಶ ಅಭಿವೃದ್ಧಿ ಹೊಂದಲು ಆ ದೇಶದಲ್ಲಿರುವ ಕಾರ್ಖಾನೆಗಳಿಗಿಂತ ಉತ್ತಮ ಶಾಲೆಗಳ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಗ್ರಾಮದಲ್ಲಿ ನಿರಂತರವಾಗಿ ವಿದ್ಯಾ ಜ್ಯೋತಿ ಪ್ರಜ್ವಲಿಸುವಂತೆ ಕಾಪಾಡಿಕೊಂಡು ಬರುತ್ತಿರುವ ನಮ್ಮೂರಿನ ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಜೀವನಾಡಿಗಳಾಗಿರುವ ಗುರುಗಳಿಗೆ ನಮ್ಮೂರಿನ ಎಲ್ಲ ಜನಪ್ರತಿನಿಧಿಗಳು ಸೇರಿಕೊಂಡು ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿ ವರ್ಷ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಗುರುವಂದನಾ ಸಮಾರಂಭವನ್ನು ಹಮ್ಮಿಕೊಳ್ಳಲು ಸಂಕಲ್ಪಿಸಿರುವುದಾಗಿ ತಿಳಿಸಿದರು.
ಡಾ.ಎಸ್.ರಾಧಾಕೃಷ್ಣನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆಯಲ್ಲಿರುವ ಹಾಗೂ ಬೇರೆ ಕಡೆಗೆ ಸೇವೆಯಲ್ಲಿರುವ ಗ್ರಾಮದ ಶಿಕ್ಷಕರು ಸೇರಿದಂತೆ 15ಕ್ಕೂ ಹೆಚ್ಚು ಶಿಕ್ಷಕರನ್ನು ಈ ಸಂದರ್ಭದಲ್ಲಿ ಕಾಲತಿಪ್ಪಿ ಭಾಗದ ಗ್ರಾಮ ಪಂಚಾಯ್ತಿ 6 ಸದಸ್ಯರ ನೇತ್ರತ್ವದಲ್ಲಿ ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕೆ.ಪಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಎಸ್.ಡಿಎಂಸಿ ಅಧ್ಯಕ್ಷ ರಾಜು ಲಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಪಾಟೀಲ, ಚಂದ್ರು ಸವದಿ, ಚಂದ್ರಶೇಖರ ಕರಿಗಾರ, ಪರಪ್ಪ ಜಗದಾಳ, ಮಲ್ಲಪ್ಪ ಉಗಾರ, ಭೀಮಪ್ಪ ಉಗಾರ, ಶಿವಪ್ಪ ಪಾಲಬಾಂವಿ, ಅಪ್ಪಣ್ಣ ಹಂದಿಗುಂದ, ರಾಮಪ್ಪ ಜಗದಾಳ, ನಿಂಗಪ್ಪ ಗಿರಮಲ್ಲನ್ನವರ, ಮಲ್ಲಪ್ಪ ಪಾಟೀಲ, ಲಕ್ಕಪ್ಪ ಸವಸುದ್ದಿ, ರಬಕವಿ ಸಿಆರ್ಪಿ ಎಸ್. ಬಿ. ಮೋಮೀನ್, ಮುಖ್ಯೋಪಾಧ್ಯಾಯ ಬಿ.ಎಸ್ ಕಡಕೋಳ, ಎಮ್ ಎಸ್ ಬಿರಾದಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕಿ ಎಸ್.ವೈ.ಬಿರಾದಾರ ಪ್ರಾರ್ಥಿಸಿದರು. ವೈ.ಎಂ.ಕಮ್ಮಾರ ಸ್ವಾಗತಿಸಿದರು, ಐ.ಎನ್.ಲಟ್ಟಿ ನಿರೂಪಿಸಿದರು. ಎಮ್.ಪಿ.ಪಾಟೀಲ್ ವಂದಿಸಿದರು.
___________

Social Plugin