ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ತಮದಡ್ಡಿ ಗ್ರಾಮಸ್ಥರ ಪುನರ್ವಸತಿಗಾಗಿ ನಿಯೋಜಿಸಿರುವ ಜಾಗದಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಹಳಿಂಗಳಿ ಗ್ರಾಮಸ್ಥರು.
ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ ನೀಡಿದ ಹಳಿಂಗಳಿ ಗ್ರಾಮಸ್ಥರುಕೂಡಲೇ ಸಮಸ್ಯೆ ಪರಿಹರಿಸಲು ಆಗ್ರಹ - ಸರಕಾರಕ್ಕೆ ಕಗ್ಗಂಟಾದ ಸಮಸ್ಯೆ
ತೇರದಾಳ : ಪ್ರತಿ ವರ್ಷ ಪ್ರವಾಹದಿಂದ ರೋಸಿ ಹೋಗಿರುವ ಹಳಿಂಗಳಿ ಗ್ರಾಮಸ್ಥರು ಪರ್ಯಾಯ ಸೂರಿಗಾಗಿ ಆಗ್ರಹಿಸಿ, ಸ್ವಗ್ರಾಮದ ಸುರಕ್ಷಿತ ಜಾಗವನ್ನು ಬೇರೆಯವರಿಗೆ ನೀಡಿ, ಸ್ವಗ್ರಾಮಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಸಾಮೂಹಿಕ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಪ್ರಸಂಗ ಇಂದು ಸಮೀಪದ ಹಳಿಂಗಳಿಯಲ್ಲಿ ಜರುಗಿತು.
ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ತಮದಡ್ಡಿ ಗ್ರಾಮಸ್ಥರ ಪುನರ್ವಸತಿಗಾಗಿ ನಿಯೋಜಿಸಿರುವ ಜಾಗದಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಗ್ರಾಮಸ್ಥರು "ನಮ್ಮ ಜಾಗ ನಮಗೆ ಬಿಡಿ- ಇಲ್ಲವಾದರೆ ಎಲ್ಲರಿಗೂ ಒಂದು ತೊಟ್ಟು ವಿಷಕೊಡಿ" ಘೋಷಣೆಗಳನ್ನು ಕೂಗಿ, ಪೋಲೀಸ್ ಭದ್ರತೆಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಉದ್ದೇಶಿಸಿರುವ ಸರಕಾರದ ಕ್ರಮವನ್ನು ಖಂಡಿಸಿದ ಗ್ರಾಮಸ್ಥರು, ಕೈಗೆತ್ತಿಕೊಂಡಿರುವ ಪುನರ್ವಸತಿ ಕೇಂದ್ರದ ಕಾಮಗಾರಿಯನ್ನು ಕೂಡಲೇ ನಿಲ್ಲಿಸದಿದ್ದಲ್ಲಿ ನಾವೆಲ್ಲರೂ ಸೇರಿ ಸಾಮೂಹಿಕ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ ಗ್ರಾಮಸ್ಥರು, ನಮ್ಮೂರಿನ ಒಂದಿಂಚು ಜಾಗವನ್ನು ಬೇರೆ ಯಾರಿಗೂ ಕೊಡುವುದಿಲ್ಲವೆಂದು ಕಡಾ ಖಂಡಿತವಾಗಿ ಹೇಳಿ ಸರಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ನಮ್ಮ ಮನವಿಯನ್ನು ಪರಿಗಣಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಸರಕಾರ ಹಾಗೂ ಮತಕ್ಷೇತ್ರದ ಶಾಸಕರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸರಕಾರ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸುವವರೆಗೆ ಸ್ಥಳದಿಂದ ಕದಲುವುದಿಲ್ಲವೆಂದು ಹಠ ಹಿಡಿದ ಗ್ರಾಮಸ್ಥರು ಸ್ಥಳದಲ್ಲಿಯೇ ಅಡುಗೆ ಸಿದ್ಧಪಡಿಸಿ ಧರಣಿ ಕುಳಿತರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ರಾಜು ನಂದೆಪ್ಪನವರ ಈ ಕುರಿತು ಈಗಾಲೇ ಮಾನ್ಯ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಆದರೂ ಕೂಡ ಹಠಕ್ಕೆ ನಿಂತು ಕಾಮಗಾರಿಯನ್ನು ಪ್ರಾರಂಭಿಸಲು ಮುಂದಾಗಿರುವುದು ಖಂಡನೀಯ, ನಮ್ಮೂರಿನ ಜಾಗವನ್ನು ಬೇರೆಯವರಿಗೆ ನೀಡಿ ನಮ್ಮನ್ನು ನಡು ಬೀದಿಯಲ್ಲಿ ನಿಲ್ಲಿಸುವುದು ಸರಿಯಲ್ಲ,ಕೂಡಲೇ ಸರಕಾರಕ್ಕೆ ನಮ್ಮ ಶಾಸಕರು ಈ ಕುರಿತು ಮನವರಿಕೆ ಮಾಡಿ ಈಗಾಗಲೇ ನಿಯೋಜಿಸಿರುವ ಜಾಗವನ್ನು ಬಿಟ್ಟು ಇದೇ ಸರ್ವೇ ನಂಬರಿನ ಬೇರೆ ಜಾಗವನ್ನು ತಮದಡ್ಡಿಯವರಿಗೆ ನಿಯೋಜಿಸಿ ಈ ಸಂಘರ್ಷಕ್ಕೆ ತೆರೆ ಎಳೆಯಬೇಕೆಂದು ವಿನಂತಿಸಿದ ಅವರು, ಮುಂದಿನ ಆಗು-ಹೋಗುಗಳಿಗೆ ಶಾಸಕರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಲಲಿತಾ ನಂದೆಪ್ಪನವರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಶಾಂತಿನಾಥ ಖೇಬೋಜಿ, ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ, ಹಾಗೂ ಸರ್ವ ಸದಸ್ಯರು ಮತ್ತು ಮುಖಂಡರಾದ ವರ್ಧಮಾನ ಖೇಬೋಜಿ, ಗಂಗಪ್ಪ ಖಾನಗೊಂಡ, ಭರಮಪ್ಪ ಬಿರಾದಾರ ಪಾಟೀಲ, ಭರಮಪ್ಪ ಕರೆಪ್ಪನವರ, ಕಲಗೊಂಡ ಪಾಟೀಲ, ಭೂಪಾಲ ಮುರಗುಂಡಿ,ಭರಮಪ್ಪ ಖಾನಗೊಂಡ, ಬಾಬಲ್ಲಿ ನಂದೆಪ್ಪನವರ, ಬಸಪ್ಪ ತೇಲಿ ರಾಜೇಸಾಬ ಗಲಗಲಿ, ಮಹಾವೀರ ಹಾದಿಮನಿ, ಮನೆಪ್ಪ ತೆಳಗಡೆ ಹಾಗೂ ಮಹಿಳೆಯರು ಸೇರಿದಂತೆ ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
Social Plugin