◆ ನೂರು ಸಿನಿಮಾ ನಿರ್ದೇಶಿಸಿದ ಓಂಸಾಯಿಪ್ರಕಾಶ್ ಆರ್ಥಿಕ ತೊಂದರೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದು ತೀರಾ ಹಳೆಯ ಕಥೆಯೇನಲ್ಲ! ◆ ಲೇಖನ : ಹಿರಿಯ ಸಿನಿಮಾ ಪತ್ರಕರ್ತರು ಶ್ರೀ ಗಣೇಶ ಕಾಸರಗೋಡು...
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನೂರು ಸಿನಿಮಾಗಳನ್ನು ನಿರ್ದೇಶಿಸಿರುವ ಒಬ್ಬೇ ಒಬ್ಬ ಸಾಧಕನ ದಾಖಲೆಯಿದ್ದರೆ ಅದು ಸಹೃದಯೀ ಓಂಸಾಯಿಪ್ರಕಾಶ್ ಅವರದ್ದು! ಆದರೆ ದುರಂತ ನೋಡಿ, ಇಂಥಾದ್ದೊಂದು ದಾಖಲೆ ಮಾಡಿದ್ದರೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಐದಾರು ವರ್ಷಗಳ ಹಿಂದೆ ಆತ್ಮಹತ್ಯೆಯ ಯತ್ನ ಮಾಡಬೇಕಾಯಿತು! ಯಾಕೆ ಹೀಗಾಯಿತು? ಸಜ್ಜನನಾಗಿರುವುದೇ ತಪ್ಪಾ? ನಿಯತ್ತಾಗಿರುವುದೇ ತಪ್ಪಾ? ಗುಣವಂತನಾಗಿರುವುದೇ ತಪ್ಪಾ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ : ಇವರು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಶೇಕಡಾ 80ರಷ್ಟು ಹಿಟ್. ಆದರೂ ತಮ್ಮ ವೃತ್ತಿ ಬದುಕಿನಲ್ಲಿ ಇವರು ಒಂದು ಸಿನಿಮಾಕ್ಕೆ ಪಡೆದಿರುವ ಅತ್ಯಧಿಕ ಸಂಭಾವನೆಯ ಮೊತ್ತ ಕೇವಲ 5 ಲಕ್ಷ ರೂಪಾಯಿಗಳು. ಇವರು ನಿರ್ದೇಶಿಸಿದ ಸಿನಿಮಾದ ನಾಯಕನಟ ಪಡೆದ ಸಂಭಾವನೆಯ ಮೊತ್ತ 5 ಕೋಟಿ! ಎಲ್ಲಿಂದೆಲ್ಲಿಯ ಹೋಲಿಕೆ? ಮಾಲಾಶ್ರೀಯವರು ವೃತ್ತಿಬದುಕಿನ ಉತ್ತುಂಗದಲ್ಲಿದ್ದಾಗಲೇ ಸಾಯಿಯವರು ಈ ಕನಿಷ್ಠ ಮೊತ್ತ ಪಡೆದರೆ, ನಂತರದ ದಿನಗಳಲ್ಲಿ ಇವರ ಸಂಭಾವನೆಯ ಮೊತ್ತ ತಂತಾನೇ ಇಳಿದು ಹೋಯಿತು! ಸೂಪರ್ ಡೂಪರ್ ಹಿಟ್ ಆಗಿರುವ 'ತವರಿಗೆ ಬಾ ತಂಗಿ' ಚಿತ್ರಕ್ಕಾಗಿ ಸಾಯಿಯವರು ನಿರ್ಮಾಪಕ ಆರ್.ಎಸ್.ಗೌಡರಿಂದ ಪಡೆದ ಸಂಭಾವನೆಯ ಮೊತ್ತ ಕೇವಲ ಎರಡೂವರೆ ಲಕ್ಷ! ಅಂದಹಾಗೆ 'ಜೋಗಿ' ಸಿನಿಮಾದ ಲೆವೆಲ್ಲಿಗೆ ಹಿಟ್ ಆಗಿರುವ 'ಅಣ್ಣತಂಗಿ' ಚಿತ್ರದ ನಿರ್ದೇಶನಕ್ಕಾಗಿ ಸಾಯಿಯವರು ಪಡೆದಿರುವ ಸಂಭಾವನೆಯ ಮೊತ್ತ ನಾಲ್ಕು ಲಕ್ಷ ರೂಪಾಯಿಗಳು! ಈ ಸಿನಿಮಾದ ಶತದಿನ ಸಮಾರಂಭದಂದು ನಿರ್ಮಾಪಕ ಪ್ರಭಾಕರ್ ಅವರು ತಾವಾಗಿಯೇ ಮನಸ್ಸು ಮಾಡಿ ಒಂದು ಸ್ಯಾ0ಟ್ರೋ ಕಾರನ್ನು ಸಾಯಿಯವರಿಗೆ ಉಡುಗೊರೆಯಾಗಿ ನೀಡಿ ದೊಡ್ಡವರಾದರು!
ನೂರು ಸಿನಿಮಾಗಳನ್ನು ನಿರ್ದೇಶಿಸಿದ ನಂತರವೂ ಸಾಯಿಪ್ರಕಾಶ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ನಿಮಗೆ ಉತ್ತರ ಸಿಕ್ಕಿರಬಹುದಲ್ಲವೇ? ತಮ್ಮ ಆರ್ಥಿಕ ಬಡತನದ ಬಗ್ಗೆ ಸ್ವತಃ ಸಾಯಿಪ್ರಕಾಶ್ ಅವರೇ ನನ್ನ ಬಳಿ ಮಾತಾಡಿದ್ದಾರೆ ಇಲ್ಲಿ : 'ಕನ್ನಡ ಚಿತ್ರರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ದುಡ್ಡು, ಖ್ಯಾತಿ, ಗೌರವ...ಈ ಮೂರನ್ನೂ ಏಕಕಾಲದಲ್ಲಿ ಪಡೆಯುವಂಥಾ ಮತ್ತೊಂದು ಉದ್ಯೋಗವಿಲ್ಲ! ಆ ಮಟ್ಟಿಗೆ ನಾನು ಅದೃಷ್ಟವಂತ. ಆದರೆ ನಾನು ಕೆಲಸವನ್ನು ಕಲಿತೆನೇ ಹೊರತು ವ್ಯವಹಾರವನ್ನು ಕಲಿಯಲಿಲ್ಲ. ಹೀಗಾಗಿ ನನ್ನದೇ ತಪ್ಪಿನಿಂದಾಗಿ ಎಡವಿ ಬಿಟ್ಟೆ. ನನ್ನ ಆರಾಧ್ಯ ದೈವ ಶಿರಡಿ ಸಾಯಿಬಾಬಾ. ನನ್ನ ಮೂಲ ಹೆಸರು ಪ್ರಕಾಶ್ ರೆಡ್ಡಿ. ಆದರೆ ಬಾಬಾ ಮೇಲಿನ ಅಪಾರ ಭಕ್ತಿಯಿಂದಾಗಿ 'ಓಂಸಾಯಿಪ್ರಕಾಶ್' ಎಂದು ಹೆಸರನ್ನು ಬದಲಾಯಿಸಿಕೊಂಡೆ. ಹೀಗೆ ಬದಲಾಯಿಸಿಕೊಂಡ ನಂತರ ಅದೃಷ್ಟ ಖುಲಾಯಿಸಿತು. ಬಾಬಾ ಕೈ ಹಿಡಿದ. ಕೈಯಲ್ಲಿ ಸ್ವಲ್ಪ ದುಡ್ಡು ಓಡಾಡುತ್ತಿರುವಂತೆಯೇ ಆ ಬಾಬಾನದ್ದೊಂದು ಸಿನಿಮಾ ನಿರ್ಮಿಸುವ ಮನಸ್ಸಾಯಿತು. ಆವರೆಗಿನ ಗಳಿಕೆಯನ್ನೆಲ್ಲಾ 'ಶ್ರೀಸಾಯಿಬಾಬಾ' ಸಿನಿಮಾಕ್ಕೆ ಸುರಿದೆ. ನಾನೇ ಬಾಬಾನ ಪಾತ್ರ ಮಾಡಿದೆ. ದುರಾದೃಷ್ಟವಶಾತ್ ಚಿತ್ರ ಕೈಕೊಟ್ಟಿತು. ಅರ್ಧ ಕೋಟಿ ಕಳಕೊಂಡೆ. ಸಾಲ ಸಾಲ ಸಾಲ...ಇಷ್ಟೆಲ್ಲಾ ತೊಂದರೆ ಅನುಭವಿಸಿದ ನಂತರವಾದರೂ ನನಗೆ ಬುದ್ದಿ ಬಂದಿದೆಯಾ ಗೊತ್ತಿಲ್ಲ!ಯಾವಾಗಲೂ ಕಮ್ಮಿ ಸಂಭಾವನೆ ಪಡೆದ ನಾನು ಇದ್ದಕ್ಕಿದ್ದ ಹಾಗೆ ಹೆಚ್ಚು ಕೇಳಿದರೆ ಯಾರು ಕೊಡುತ್ತಾರೆ ಹೇಳಿ? ನಾನಲ್ಲವಾದರೆ ಇನ್ನೊಬ್ಬ ಅವಕಾಶಕ್ಕಾಗಿ ಕಾದಿರುತ್ತಾನೆ ಅಲ್ಲವೇ...?' - ಎಂದು ಓಂಸಾಯಿಪ್ರಕಾಶ್ ಅವರು ಪ್ರಶ್ನಿಸುತ್ತಿರುವಂತೆಯೇ ಯಾವುದೋ ಕಾಲ್ ಬಂತು. ನನ್ನ ಮುಂದೆಯೇ ಮಾತಾಡಿದರು. ಅದು ಸಿನಿಮಾವೊಂದನ್ನು ನಿರ್ದೇಶಿಸಲು ಬಂದ ಆಫರ್. ತಮಾಷೆಗೆ ಕೇಳಿದೆ : 'ಎಷ್ಟು ಸಂಭಾವನೆಗೆ ಒಪ್ಪಿಕೊಂಡ್ರಿ ಸಾರ್?' - ವಿಷಾದದಿಂದಲೇ ಸಾಯಿಯವರು ಉತ್ತರಿಸಿದರು : 'ಏನ್ ಮಾಡೋದು ಹೇಳಿ ಸಾರ್? ನಮ್ಮ ವೀಕ್'ನೆಸ್ಸನ್ನು ಇವ್ರೆಲ್ಲಾ ಚೆನ್ನಾಗಿಯೇ ಯೂಸ್ ಮಾಡಿಕೊಳ್ತಿದ್ದಾರೆ...ಎರಡು ಲಕ್ಷಕ್ಕೆ ಸೆಟ್ಲ್ ಆಯಿತು. ನನ್ಗೂ ದುಡ್ಡಿನ ಅರ್ಜೆನ್ಸಿ ಇತ್ತು. ಒಪ್ಪಿಕೊಂಡು ಬಿಟ್ಟೆ...' - ಅಲ್ಲಿಗೆ ಓಂಸಾಯಿಪ್ರಕಾಶಾಯ ನಮಃ!!!
Social Plugin