ಇಂಥದ್ದೊಂದು ಬೃಹತ್ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಪ್ರಾರಂಭವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ. ಈ ಪ್ರಯಾಣದಲ್ಲಿ ಕಥೆಗೆ ಸೂಕ್ತ ಸಲಹೆ, ಸೂಚನೆ ಕೊಟ್ಟು ಪ್ರೋತ್ಸಾಹಿಸಿದ ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್, ತೋಟಪಲ್ಲಿ ಸಾಯಿನಾಥ್, ತೋಟ ಪ್ರಸಾದ್ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರನ್ನು ವಿಷ್ಣು ಮರೆಯುವುದಿಲ್ಲ. ಅವರೆಲ್ಲರ ಸಲಹೆ-ಸೂಚನೆಗಳಿಲ್ಲದಿದ್ದರೆ ಚಿತ್ರದ ಕಥೆ ಇಷ್ಟೊಂದು ಅದ್ಭುತವಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎಂದು ನಂಬಿದ್ದಾರೆ.
ಕಳೆದ ಎಂಟು ತಿಂಗಳುಗಳು ಮೆರೆಯಲಾರದ ಅನುಭವ ಎನ್ನುವ ವಿಷ್ಣು, ‘’ಕಣ್ಣಪ್ಪ’ ಚಿತ್ರತಂಡದವರಿಗೆ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಮರೆಯಲಾರದ ಅನುಭವ. ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೇ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ ‘ಕಣ್ಣಪ್ಪ’ ಚಿತ್ರವು ಚಿತ್ರೀಕರಣ ಹಂತದವರೆಗೂ ಬಂದಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲ್ಯಾಂಡ್ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ. ನಮ್ಮ ತಂದೆ ಮೋಹನ್ ಬಾಬು ಅವರ ಸಹಕಾರ, ಪ್ರೋತ್ಸಾಹವು ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ’ ಎನ್ನುತ್ತಾರೆ.
‘ಕಣ್ಣಪ್ಪ’ ಚಿತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆಯಂತೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಅದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಸುಳ್ಳುಸುದ್ದಿಗಳು ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, X (Twitter)ನ ತಮ್ಮ ಚಿತ್ರದ ಅಧಿಕೃತ ಖಾತೆಯನ್ನು ಮಾತ್ರ ನಂಬಬೇಕೆಂದು ವಿಷ್ಣು ಮನವಿ ಮಾಡಿಕೊಂಡಿದ್ದಾರೆ.

Social Plugin