ಸಮಾಜ ಹಾಳು ಮಾಡುವ ಕೃತ್ಯದಲ್ಲಿರುವ ಸವದಿ
ಹಗರಣ ತನಿಖೆಯಾಗಲು ವಿಳಂಬ ನೀತಿ-ಮಗದುಮ್ ಆರೋಪ
 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರವೇಶಗೊಂಡು ಸಹಕಾರಿ ಸ್ವಾಸ್ತ್ಯ ಹದಗೆಡಿಸುವ ಮೂಲಕ ಸಮಾಜ ಹಾಳು ಮಾಡುವ ಕೃತ್ಯದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ತೊಡಗಿದ್ದಾರೆಂದು ಕಾಂಗ್ರೆಸ್ ಮುಖಂಡ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಚುನಾವಣೆ ಜರುಗುತ್ತಿರುವ ಬನಹಟ್ಟಿ, ಆಸಂಗಿ ಹಾಗು ಹಣಗಂಡಿ ಪಿಕೆಪಿಎಸ್‌ನಲ್ಲಿ ಅವಿರೋಧ ಆಯ್ಕೆಗೆ ಸ್ಪಂದಿಸದೆ, ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಹಾಗು ಮುಂದಿನ ಬಿಡಿಸಿಸಿ ಬ್ಯಾಂಕ್‌ಗೆ ಮತ್ತೇ ಸ್ಪರ್ಧೆ ಮಾಡುವ ಉದ್ದೇಶದಿಂದ ಚುನಾವಣೆ ನಡೆಸಲೇಬೇಕೆಂಬ ದುರುದ್ಧೇಶದೊಂದಿಗೆ ಸಂಬಂಧಿಕರಲ್ಲಿಯೇ ಒಡಕು ಮೂಡಿಸಿ ಸ್ವಂತ ಹಣ ತೊಡಗಿಸಿ ಸ್ಪರ್ಧೇಗಿಳಿಸಿ ರಾಜಕೀಯವಾಗಿ ಪರಿವರ್ತನೆಗೊಳಿಸುವಲ್ಲಿ ಕಾರಣರಾಗಿದ್ದಾರೆಂದು ಮಗದುಮ್ ಆರೋಪಿಸಿದರು.
*ಆರೋಪ ಸಾಬೀತಾದರೆ ಸಹಕಾರಿ ಕ್ಷೇತ್ರದಿಂದ ನಿವೃತ್ತಿ
 ಈಚೆಗೆ ಶಾಸಕ ಸಿದ್ದು ಸವದಿ ನನ್ನ ಮೇಲೆ ಆರೋಪ ಮಾಡಿ, ಸರ್ವಾಧಿಕಾರ ಧೋರಣೆಯಿಂದ ಸಂಘ ನಡೆಸಿದ್ದೇನೆಂದಿರುವದನ್ನು ಸಾಬೀತುಪಡಿಸಿದರೆ ಸಹಕಾರಿ ಹಾಗು ರಾಜಕೀಯ ಕ್ಷೇತ್ರಗಳೆರಡರಿಂದಲೂ ನಿವೃತ್ತಿಯಾಗುತ್ತೇನೆಂದು ಬಹಿರಂಗವಾಗಿ ಸ್ಪಷ್ಟಪಡಿಸಿದರು.
*ಹಗರಣ ಶೀಘ್ರ ತನಿಖೆಯಾಗಲಿ
 ಈಗಾಗಲೇ ತೇರದಾಳ ಶಾಸಕ ಸಿದ್ದು ಸವದಿಯವರ ಅಕ್ರಮ ಆಸ್ತಿಯಾಗಿರುವ 400 ಕೋಟಿ ರೂ.ಗಳಷ್ಟು ಆಸ್ತಿ ಬಗ್ಗೆ ತನಿಖೆ ನಡೆಸುವಲ್ಲಿ ವಿಳಂಬನೀತಿಯಾಗುತ್ತಿದೆ. ಈಗ ಸರ್ಕಾರ ನಮ್ಮದೇಯಿದ್ದು, ಪ್ರಾಮಾಣಿಕ ತನಿಖೆಯ ಮೂಲಕ ಹಗರಣ ಸಾಬೀತುಪಡಿಸುವಲ್ಲಿ ಶೀಘ್ರ ತನಿಖೆಯಾಗುವಂತೆ ಒತ್ತಾಯಿಸಲಾಗುವದು.