ಅಭ್ಯರ್ಥಿ ಆಯ್ಕೆಗೆ ತೇರದಾಳವೊಂದೇ ಬಾಕಿ
 ಬಾಗಲಕೋಟೆ ಜಿಲ್ಲೆಯ 7 ಮತಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಕಾಂಗ್ರೆಸ್ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, 2ನೇ ಪಟ್ಟಿಯಲ್ಲಿ ಬಿಡುಗಡೆಯಾದ 5 ದರಲ್ಲಿ 4 ಕ್ಷೇತ್ರಗಳ ಅಭ್ಯರ್ಥಿ ಬಿಡುಗಡೆಯಾಗಿವೆ. ಆದರೆ ಕೊನೆಯದಾಗಿ ಉಳಿದಿರುವ ತೇರದಾಳ ಕ್ಷೇತ್ರ ಇನ್ನೂ ಯಾರ `ಕೈ’ವಶವಾಗಲಿದೆ ಎಂಬುದೇ ಮರಿಚಿಕೆಯಾಗಿದೆ.

ತೀವ್ರ ಕುತೂಹಲ ಮೂಡಿಸಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀಯವರಿಗೆ ಟಿಕೆಟ್ ನೀಡುವಲ್ಲಿ ಹೈಕಮಾಂಡ್‌ಗೆ ತೀವ್ರ ತಲೆ ನೋವಾಗಿದ್ದು, ಈ ಬಾರಿ ಸ್ಥಳೀಯ ಮುಖಂಡರ ಒತ್ತಡ ಹೆಚ್ಚಾಗಿರುವದರಿಂದ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಎ.ಆರ್. ಬೆಳಗಲಿ, ಕಿಸಾನ್ ಘಟಕದ ರಾಜ್ಯ ಸಂಚಾಲಕರುಗಳಾದ ಡಾ. ಪದ್ಮಜಿತ ನಾಡಗೌಡ ಪಾಟೀಲ, ಸಿದ್ದು ಕೊಣ್ಣೂರ, ನೇಕಾರ ಮುಖಂಡ ಡಾ. ಎಂ.ಎಸ್. ದಡ್ಡೇನವರ ಹೀಗೆ ಸರದಿಯಲ್ಲಿ ಮುಖಂಡರ ಪ್ರಾಬಲ್ಯವು ಹೈಕಮಾಂಡ್‌ಗೆ ಸವಾಲಾಗುವಲ್ಲಿ ಕಾರಣವಾಗಿದೆ.

ಅಳೆದು ತೂಗಿ 2 ನೇ ಪಟ್ಟಿ ಬಿಡುಗಡೆ ಮಾಡಿದರೂ ತೇರದಾಳ ಕ್ಷೇತ್ರದ ಅಭ್ಯರ್ಥಿ ಮಾತ್ರ ನಿಗೂಢವಾಗಿಯೇ ಉಳಿದಿದೆ. ಸ್ಥಳೀಯ ಕಾಂಗ್ರೆಸ್‌ನಲ್ಲಿ ಮಾತ್ರ ಅಷ್ಟೇ ಪ್ರಬಲವಾಗಿ ಹೋರಾಟ ನಡೆಸುತ್ತಿದ್ದು, ಈ ಬಾರಿ ನಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಶೀಘ್ರವೇ ಘೋಷಣೆಯಾಗಲಿರುವ ಅಭ್ಯರ್ಥಿ ಆಯ್ಕೆಯಲ್ಲಿ ಯಾರ ಹೆಸರು ನಮೂದಾಗಲಿದೆ ಎಂಬುದೇ ತೀವ್ರ ಕುತೂಹಲವಾಗಿದ್ದು, ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ.