ನೇಕಾರ ಒಕ್ಕೂಟದಿಂದ ಶ್ರೀಗಳ ಸ್ಪರ್ಧೆ..!?
 ಬಹುವಿಶೇಷವಾಗಿ ಸೃಷ್ಟಿಗೊಂಡಿರುವ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಮಖಂಡಿ ಹಾಗು ತೇರದಾಳದಿಂದ ಒಟ್ಟಾರೆ ಐದು ಕಣಕ್ಕಿಳಿದಿರುವ ಅನುಭವಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿರುವ ಸಿದ್ದು ಸವದಿ ವಿರುದ್ಧ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಮುಖಕ್ಕೆ ಮಣೆ ಹಾಕಿದ್ದು ಸ್ಥಳೀಯ ಅಭ್ಯರ್ಥಿಯ ಒತ್ತಾಯಕ್ಕೆ ಮಣಿದು ಸಿದ್ದು ಕೊಣ್ಣೂರ ಅವರಿಗೆ ಅವಕಾಶಗಿಟ್ಟಿಸಿದೆ.
ಇವೆಲ್ಲದರ ಮಧ್ಯ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್‌ನ ಭಾರಿ ನಿರೀಕ್ಷೆಯಲ್ಲಿದ್ದ ನಿರ್ಣಾಯಕ ಮತದಾರರಾಗಿರುವ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡದ ಕಾರಣ ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಕುರುಹಿನಶೆಟ್ಟಿ ಹಾಗು ಹಟಗಾರ ಸಮಾಜದೊಂದಿಗೆ ಹಾಗು ತೇರದಾಳ ಮತಕ್ಷೇತ್ರದ ಸ್ವಾಭಿಮಾನಿ ವೇದಿಕೆ ವತಿಯಿಂದ ನೇಕಾರ ಒಕ್ಕೂಟದಿಂದ ಪೀಠಾಧ್ಯಕ್ಷರಾದ ಹಳೇಹುಬ್ಬಳ್ಳಿ ಹಾಗು ರಾಮಪೂರದ ವೀರಭಿಕ್ಷಾವ್ರತಿ ಮಠದ ಶಿವಶಂಕರ ಶ್ರೀಗಳನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸುವ ಎಲ್ಲ ವ್ಯವಸ್ಥೆಗಳು ನಡೆಯುತ್ತಿವೆ.
ಅತೃಪ್ತರಾದ ಟಿಕೆಟ್ ವಂಚಿತ ಬಿಜೆಪಿಯಿಂದ ಭೀಮಶಿ ಮಗದುಮ್, ರಾಜೇಂದ್ರ ಅಂಬಲಿ, ಕಿರಣಕುಮಾರ ದೇಸಾಯಿ, ಬಸವರಾಜ ಬಾಳಿಕಾಯಿ ಹಾಗು ಕಾಂಗ್ರೆಸ್‌ನಿಂದ ಡಾ. ಪದ್ಮಜಿತ ನಾಡಗೌಡ ಪಾಟೀಲ, ಡಾ. ಎ.ಆರ್. ಬೆಳಗಲಿ ಸೇರಿದಂತೆ ಉಭಯ ಪಕ್ಷಗಳ ಅನೇಕ ಭಿನ್ನಮತೀಯರು ಸೇರಿ ಅಭ್ಯರ್ಥಿಯನ್ನಾಗಿ ಶ್ರೀಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ.
`ಸ್ಪರ್ಧೆಗೆ ನನ್ನ ವಯಕ್ತಿಕ ಬಯಕಯೇನಿಲ್ಲ. ನೇಕಾರ ಸಮುದಾಯಕ್ಕೆ ಬಿಜೆಪಿ-ಕಾಂಗ್ರೆಸ್ ಅನ್ಯಾಯವೆಸಗಿದ್ದು ನಿಜ. ಸಮುದಾಯಗಳಿಂದ ಕಣಕ್ಕಿಳಿಯಲು ಒತ್ತಡವಿದೆ. ನಿರ್ಧಾರ ಇನ್ನೂ ಪ್ರಕಟಿಸಿಲ್ಲ.’----ಶಿವಶಂಕರ ಶ್ರೀ, ಪೀಠಾಧ್ಯಕ್ಷರು, ಕುರುಹಿನಶೆಟ್ಟಿ ಸಮಾಜ, ವೀರಭಿಕ್ಷಾವ್ರತಿ ಮಠ, ಹಳೇ ಹುಬ್ಬಳ್ಳಿ