ಕಮಲಕ್ಕೆ " ಕೈ " ಕೊಟ್ಟ ಜಗದೀಶ್ ಶೆಟ್ಟರ್ !
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಙತಿಮವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ . ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಅಧಿಕೃತವಾಗಿ ಸೇರ್ಪಡೆಯಾದರು . ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು . ಜಗದೀಶ್ ಶೆಟ್ಟರ್ ಅವರಿಗೆ ಶಾಲು ಹೊದಿಸಿ ಪಕ್ಷದ ಬಾವುಟ ಕೊಟ್ಟು ಪಕ್ಷಕ್ಕೆ ಸ್ವಾಗತಿಸಲಾಯ್ತು . 
ಚುನಾವಣೆ ಹೊಸ್ತಿಲಲ್ಲೆ ಇರೋದ್ರಿಂದ ಕಾಂಗ್ರೆಸ್ ಗೆ ಇದು ಪ್ಲಸ್ ಪಾಯಿಂಟ್ ಎಂದು ಹೇಳಲಾಗುತ್ತಿದ್ದರು , ಜಗದೀಶ್ ಶೆಟ್ಟರ್ ಅವರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ . 
ಇನ್ನೂ ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ " ಜಗದೀಶ್ ಶೆಟ್ಟರ್ ಸೇರ್ಪಡೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲವನ್ನ ಇನ್ನಷ್ಟು ಹೆಚ್ಚಿಸಲು ಸಹಕಾರಿ ಆಗಿದೆ . ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಬೇಕು ಎಂಬ ಆಶಯದೊಂದಿಗೆ ಪಕ್ಷದ ಸದಸ್ಯತ್ವವನ್ನು ಇಂದು ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಂಸದ ಅಮರ್ ಸಿಂಗ್ ಪಾಟೀಲ್ ಪಕ್ಷ ಸೇರುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಪಕ್ಷದ ನೀತಿ ಹಾಗೂ ಐಡಿಯಾಲಜಿಗಳ ಅರಿವು ಶೆಟ್ಟರ್ಗೆ ಇದೆ. ಅವರು ಬಿಜೆಪಿಯಲ್ಲಿ ಇದ್ದು ಅಲ್ಲಿನ ಕಾರ್ಯನಿರ್ವಹಣೆ ಹೇಗೆ ನಡೆಸಿದ್ದಾರೆ ಎನ್ನುವುದು ನಿಮಗೆ ಗೊತ್ತು. ಇಂದು ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ನ ಐಡಿಯಾಲಜಿಯನ್ನ ಒಪ್ಪಿ ಸೇರ್ಪಡೆ ಆಗುತ್ತಿದ್ದಾರೆ. ತಮ್ಮ ಶಕ್ತಿಯನ್ನು ಬಳಸಿ ಬಿಜೆಪಿಯ ಏಳಿಗೆಗೆ ಶ್ರಮಿಸಿದರು. ಇಂದು ಅವರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಅವರು ಮಾತ್ರವಲ್ಲ ಆ ಭಾಗದಲ್ಲಿನ ಕಾಂಗ್ರೆಸ್ ಶಕ್ತಿಯನ್ನು ಸಹ ಹೆಚ್ಚಿಸಿದ್ದಾರೆ. ಶೆಟ್ಟರ್ ತಂದೆ ಸಹ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಮಯ ರಾಜಕಾರಣ ಮಾಡಿದ್ದರು. ಅತಿ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ " ಎಂದು ಹೇಳಿದರು . 
ಇದೇ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ " ನನಗೆ ಅಧಿಕಾರದ ಆಸೆ ಇಲ್ಲ . ಆದರೆ ಟಿಕೆಟ್ ನೀಡದಿದ್ದದ್ದು ನನ್ನ ವೃತ್ತಿ ಜೀವನಕ್ಕೆ ಬೇಸರ ತರಿಸಿದೆ . ಹೋಗಾಗಿ ಕಾಂಗ್ರೆಸ್ ಸೇರ್ಪಡೆಗೊಂಡೆ " ಎಂದರು