ಪ್ರತಿ ಸಿನಿಮಾದಲ್ಲೊಂದು ಹೊಸಬಗೆಯ ಪಾತ್ರದ ಮೂಲಕ ಸಮಸ್ತ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಕನ್ನಡದ ಖ್ಯಾತ ಖಳನಟ ಮಧು ಗುರುಸ್ವಾಮಿ ಕಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ, ಪತ್ತುತಲಾ ಎಂಬ ಟೈಟಲ್ ನಡಿ ತಮಿಳಿಗೆ ರಿಮೇಕ್ ಆಗಿದ್ದು, ಇದೇ 30ಕ್ಕೆ ಚಿತ್ರ ತೆರೆಗೆ ಬರ್ತಿದೆ. ಕನ್ನಡದಲ್ಲಿ ಸಿಂಗ ಪಾತ್ರ ನಿರ್ವಹಿಸಿದ್ದ ಮಧು ಗುರುಸ್ವಾಮಿ ಅದೇ ಪಾತ್ರವನ್ನು ತಮಿಳಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಿಲಂಬರಸನ್ ನಾಯಕನಾಗಿ ಅಭಿನಯಿಸಿರುವ ಪತ್ತುತಲಾ ಸಿನಿಮಾಗೆ ಖ್ಯಾತ ನಿರ್ದೇಶಕ ಒಬಿಲ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಪಕ ಜ್ಞಾನವೆಲ ರಾಜ ಬಂಡವಾಳ ಹೂಡಿದ್ದಾರೆ. ಸಿಂಗ ಪಾತ್ರವನ್ನು ಜ್ಞಾನವೆಲ ಮೆಚ್ಚಿ ತಮಗೆ ಅವಕಾಶ ನೀಡಿರುವುದಕ್ಕೆ ಮಫ್ತಿ ಸಾರಥಿ ನರ್ತನ್ ಬಹುಮುಖ್ಯ ಕಾರಣ ಎನ್ನುತ್ತಾರೆ ಮಧು ಗುರುಸ್ವಾಮಿ.
ಅಭಿನಯ ತರಂಗ ಶಾಲೆಯಲ್ಲಿ ಎರಡು ವರ್ಷಗಳ ಕಾಲ ನಟನೆ ತರಬೇತಿ ಪಡೆದು ಡೆಡ್ಲಿ-2 ಸಿನಿಮಾ ಮೂಲಕ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿದ ಮಧು ಗುರುಸ್ವಾಮಿ, ಚಿಂಗಾರಿ ಚಿತ್ರದಲ್ಲಿ ವಿನೀಶ್ ಮಲ್ಹೋತ್ರ ಪಾತ್ರದಲ್ಲಿ, ಯಶ್ ಅಭಿನಯದ ಜಾನು ಸಿನಿಮಾದಲ್ಲಿ ಸಂಗಮೇಶ್ ಎಂಬ ಪಾತ್ರದಲ್ಲಿ, ಶಿವಣ್ಣನ ಹೈವೋಲ್ಟೇಜ್ ಕಥೆ ಭಜರಂಗಿಯಲ್ಲಿ ಮಂತ್ರವಾದಿಯಾಗಿ, ಶರಣ್ ನಟನೆಯ ಜೈ ಮಾರುತಿ 800 ಚಿತ್ರದಲ್ಲಿ ಹಾಸ್ಯನಟನಾಗಿ ಹೀಗೆ ತರಹೇವಾರಿ ಪಾತ್ರದ ಮೂಲಕ ಕನ್ನಡದಲ್ಲಿ ಖ್ಯಾತಿ ಪಡೆದು ಬಳಿಕ ಸಾಕ್ಷ್ಯಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಮಧು, ಪ್ರಶಾಂತ್ ನೀಲ್ ನಿರ್ದೇಶನದ ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ನಲ್ಲಿ ಪ್ರಮುಖದಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರು ಹಾಜರಾಗುವ ಮಧು ಗುರುಸ್ವಾಮಿ ಸದ್ಯ ಬಹುಬೇಡಿಕೆ ನಟ..

Social Plugin