"ರಾಜಮಾರ್ತಾಂಡ" ಚಿತ್ರಕ್ಕೆ ಡಿ.ಟಿ.ಎಸ್
 ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆ
ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ ನಟ ಚಿರಂಜೀವಿ ಸರ್ಜಾ, ಚಿಕ್ಕ ವಯಸ್ಸಿನಲ್ಲೇ ವಿಧಿವಶರಾಗಿದ್ದು ನೋವಿನ ಸಂಗತಿ. "ರಾಜಮಾರ್ತಂಡ" ಚಿತ್ರದಲ್ಲಿ ಚಿರು ನಾಯಕರಾಗಿ ಅಭಿನಯಿಸಿದ್ದರು. ಚಿತ್ರೀಕರಣ ಕೂಡ ಮುಕ್ತಾಯವಾಗಿತ್ತು. ಡಬ್ಬಿಂಗ್ ಮುಗಿಸಬೇಕಿತ್ತು ಅಷ್ಟರಲ್ಲಿ ಯಾರು ನಿರೀಕ್ಷಿಸದ ಘಟನೆ ನಡೆದುಹೋಯಿತು. 
ಆನಂತರ ಈ ಚಿತ್ರವನ್ನು ಪೂರ್ಣ ಮಾಡಲು ಸಹಕಾರ ನೀಡಿದ್ದು, ಮೇಘನಾರಾಜ್ , ಧ್ರುವ ಸರ್ಜಾ ಹಾಗೂ ಕುಟುಂಬದವರು.
ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಅವರೆ ಡಬ್ಬಿಂಗ್ ಮಾಡಿದರು. ಡಬ್ಬಿಂಗ್ ವೇಳೆ ಅಣ್ಣನ ನೆನೆದು ಧ್ರುವ ಭಾವುಕರಾಗುತ್ತಿದ್ದರು.
ಈಗ ಸದ್ಯ ಚಿತ್ರಕ್ಕೆ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ‌. ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ಬಿಡುಗಡೆ ವೇಳೆ ಮೇಘನರಾಜ್, ಧ್ರುವ ಸರ್ಜಾ, ಸುಂದರರಾಜ್ ಹಾಗೂ ಕನ್ನಡದ ಅನೇಕ ಹೆಸರಾಂತ ನಟರು ಚಿತ್ರತಂಡದೊಂದಿಗೆ ಇರುವುದಾಗಿ ಹೇಳಿದ್ದಾರೆ. 
ಈ ಹಿಂದೆ ಶಂಕರ್ ನಾಗ್ ಅವರ ಪಾತ್ರಕ್ಕೆ ಅನಂತನಾಗ್ ಅವರು, ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೆ ಶಿವರಾಜಕುಮಾರ್ ಅವರು, ಈಗ "ರಾಜಮಾರ್ತಂಡ" ಚಿತ್ರದ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದಾರೆ. ಈ ಸಹೋದರರ ಪ್ರೀತಿಯ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎನ್ನುತ್ತಾರೆ "ರಾಜಮಾರ್ತಾಂಡ" ಚಿತ್ರದ ನಿರ್ಮಾಪಕ ಶಿವಕುಮಾರ್ ಹಾಗೂ ನಿರ್ದೇಶಕ ಕೆ. ರಾಮನಾರಾಯಣ್. 
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.
ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.