ಕರ್ನಾಟಕದಲ್ಲಿ 4 ಫಿಲ್ಮ್ ಚೇಂಬರ್ : ‘ಹೊಯ್ಸಳ’ ಚಿತ್ರಕ್ಕೆ ತಂದಿಟ್ಟ ಸಂಕಷ್ಟ
ಕನ್ನಡ ಸಿನಿಮಾ ರಂಗವನ್ನು ಮದ್ರಾಸ್ ಬಂಧನದಿಂದ ಬಿಡಿಸಿಕೊಂಡು, ಸ್ವತಂತ್ರವಾಗಿ ಚಿತ್ರೋದ್ಯಮ ಕಟ್ಟುವಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಪಾತ್ರ ದೊಡ್ಡದಿದೆ. ಕನ್ನಡ ಚಿತ್ರೋದ್ಯಮ ಕಟ್ಟಿದ ಮಹಾನ್ ವ್ಯಕ್ತಿಗಳು ವಾಣಿಜ್ಯ ಮಂಡಳಿಯ ಆಡಳಿತ ಚುಕ್ಕಾಣೆ ಹಿಡಿದು ಚಿತ್ರೋದ್ಯಮವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ದಿಕ್ಕು ತಪ್ಪಿದ ಹಡಗಿನಂತಾಗಿದೆ ವಾಣಿಜ್ಯ ಮಂಡಳಿ. ಪರಿಣಾಮ ಕರ್ನಾಟಕದಲ್ಲೇ ನಾಲ್ಕು ಚಲನಚಿತ್ರ ವಾಣಿಜ್ಯ ಮಂಡಳಿಗಳು ಹುಟ್ಟಿಕೊಂಡಿವೆ. ಇದರಿಂದಾಗಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಶಿವಾನಂದ ಸರ್ಕಲ್ ಬಳಿ ಇರುವ, ಚಿತ್ರೋದ್ಯಮದ ಮಾತೃಸಂಸ್ಥೆ ಎಂದೇ ಕರೆಯಲ್ಪಡುವ ಚಲನಚಿತ್ರ ವಾಣಿಜ್ಯ ಮಂಡಳಿಯು ಸಿನಿಮಾಗೆ ಸಂಬಂಧಿಸಿದಂತೆ ಶೀರ್ಷಿಕೆ ನೋದಂಣಿ, ನಿರ್ಮಾಣ ಸಂಸ್ಥೆಗಳಿಗೆ ಸದಸ್ಯತ್ವ ನೀಡುವುದು ಹೀಗೆ ನಾನಾ ಕೆಲಸಗಳನ್ನು ಮಾಡುತ್ತಿತ್ತು. ಆಗ ಸಿನಿಮಾ ತಂಡಗಳಿಗೆ ಟೈಟಲ್ ವಿಷಯದಲ್ಲಿ ಯಾವುದೇ ಗೊಂದಲ ಇರುತ್ತಿರಲಿಲ್ಲ. ಇದೀಗ ನಾಲ್ಕು ವಾಣಿಜ್ಯ ಮಂಡಳಿಗಳು ಇರುವುದರಿಂದ ನಾಲ್ಕೂ ಕಡೆ ಈ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಅದರಲ್ಲೂ ಟೈಟಲ್ ವಿಷಯದಲ್ಲಿ ಭಾರೀ ಗೊಂದಲ ಶುರುವಾಗಿದೆ.
ಈ ಹಿಂದೆ ರಮ್ಯಾ ನಿರ್ಮಾಣದ ಚಿತ್ರದ ಟೈಟಲ್ ವಿಚಾರವೂ ಹೀಗೆಯೇ ಆಗಿದ್ದು. ರಾಜೇಂದ್ರ ಸಿಂಗ್ ಬಾಬು ಅವರು ಒಂದು ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದರೆ ಮತ್ತೊಂದು ಮಂಡಳಿಯಲ್ಲಿ ರಮ್ಯಾ ನೋಂದಾಯಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದೆ. ಸದ್ಯ ಡಾಲಿ ಧನಂಜಯ್ (Dolly Dhananjay) ನಟನೆಯ ಹೊಯ್ಸಳ (Hoysala) ಚಿತ್ರಕ್ಕೂ ಇಂಥದ್ದೊಂದು ತೊಂದರೆ ಅನುಭವಿಸುವಂತಾಗಿದೆ.
ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದ ‘ಹೊಯ್ಸಳ’ ಸಿನಿಮಾ ಟೀಮ್, ಅದೇ ಹೆಸರಿನಲ್ಲಿ ಭಾರೀ ಪ್ರಚಾರ ಮಾಡಿತ್ತು. ಕೊನೆಗೆ ಸೆನ್ಸಾರ್ (Censor) ಸಮಯದಲ್ಲಿ ಇದೇ ಹೆಸರಿನ ಸಿನಿಮಾ ಈಗಾಗಲೇ ಸೆನ್ಸಾರ್ ಆಗಿರುವ ವಿಚಾರ ಗಮನಕ್ಕೆ ಬಂತು. ಈಗ ಆ ಸಿನಿಮಾದ ಟೈಟಲ್ ಅನ್ನು ಗುರುದೇವ ಹೊಯ್ಸಳ ಎಂದು ಮರುನಾಮಕರಣ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಹಲವು ರೀತಿಯ ತೊಂದರೆಗಳನ್ನು ಎದುರಿಸಿದೆ.