ಚಿತ್ರದ ಬಹುತೇಕ ತಾರಾಬಳಗದ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ
ಚೆನ್ನೈ: ಇತ್ತೀಚೆಗಷ್ಟೇ ಸಿನಿಮಾ ಘೋಷಣೆ ಮಾಡಿದ್ದ ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್, ಇದೀಗ ದಳಪತಿ 67 ಚಿತ್ರದ ಅದ್ದೂರಿ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ.
ಚೆನ್ನೈನಲ್ಲಿ ಫೆ. 2ರಂದು ನಡೆದ ಅದ್ದೂರಿ ಮುಹೂರ್ತದಲ್ಲಿ ಚಿತ್ರದ ಬಹುತೇಕ ಕಲಾವಿದರು, ತಂತ್ರಜ್ಞರು ಭಾಗವಹಿಸಿ ಮುಹೂರ್ತವನ್ನು ಸಂಪನ್ನಗೊಳಿಸಿದ್ದಾರೆ.
ಕಲಾವಿದರಾದ ತ್ರಿಷಾ ಕೃಷ್ಣನ್, ಅರ್ಜುನ್ ಸರ್ಜಾ, ಜಗದೀಶ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಸಿನಿಮಾದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಮುಹೂರ್ತದಲ್ಲಿ ಹಾಜರಿದ್ದರು.
7 ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣವಾಗಲಿರುವ ದಳಪತಿ 67 ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ಟರ್ ಸಿನಿಮಾ ಬಳಿಕ ವಿಜಯ್ ಜತೆಗಿದು ನಿರ್ದೇಶಕರ ಎರಡನೇ ಸಿನಿಮಾ ಆಗಿದೆ. ಕೈದಿ, ಮಾಸ್ಟರ್ ಮತ್ತು ಬೀಸ್ಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್ಸ್ಟಾರ್ ಅನಿರುದ್ಧ ರವಿಚಂದ್ರನ್ ದಳಪತಿ 67ಕ್ಕೂ ಸಂಗೀತ ನೀಡಲಿದ್ದು, ನಾಲ್ಕನೇ ಬಾರಿ ವಿಜಯ್ ಜತೆ ಕೈ ಜೋಡಿಸಿದ್ದಾರೆ.
ಇನ್ನುಳಿದಂತೆ ಮನೋಜ್ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್ ರಾಜ್ ಸಂಕಲನ, ಸತೀಸ್ ಕುಮಾರ್ ಕಲೆ, ದಿನೇಶ್ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್ ಕನಗರಾಜ್, ರತ್ನ ಕುಮಾರ್, ಧೀರಜ್ ವೈದ್ಯ, ರಾಮಕುಮಾರ್ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Social Plugin