"ಕಡಲತೀರದ ಭಾರ್ಗವ" ಚಿತ್ರದ ಶೀರ್ಷಿಕೆ ಗೀತೆಗೆ ಕನ್ನಡಿಗರು ಫಿದಾ.
ವಿಭಿನ್ನ ಕಥಾಹಂದರ ಹೊಂದಿರುವ "ಕಡಲ ತೀರದ ಭಾರ್ಗವ" ಚಿತ್ರ ಈಗಾಗಲೇ ಟೀಸರ್, ಹಾಡಿನ ಮೂಲಕ ಜನರ ಮನ ಗೆದ್ದಿದೆ. ಪ್ರಸ್ತುತ ಈ ಚಿತ್ರದ ಶೀರ್ಷಿಕೆ ಗೀತೆಯ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ ಜನಪ್ರಿಯವಾಗಿದೆ.
ನಿರ್ದೇಶಕ ಪನ್ನಗ ಸೋಮಶೇಖರ್ ಬರೆದಿರುವ "ಕಾರ್ಮೋಡ ಕೈಚಾಚಿ ಸ್ವಾಗತಿಸಿದೆ ನಿನ್ನ" ಎಂಬ ಜನರ ಮನಸಲ್ಲಿ ಸಮ್ಮೋಹ ಗೊಳಿಸುವ ಗೀತೆಯನ್ನು ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ಅಶ್ವಿನ್ ಹಾಗೂ ಅನಿಲ್ ಸಿ.ಜೆ ಸುಮಧುರವಾಗಿ ಹಾಡಿದ್ದಾರೆ. ಅನಿಲ್ ಸಿ.ಜೆ ಅವರೆ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ನಾಯಕನ ಪರಿಚಯದ ಗೀತೆಯಾಗೂ ಹೊರಹೊಮ್ಮಿದೆ. ARC music ಮೂಲಕ ಬಿಡುಗಡೆಯಾಗಿರುವ ಈ ಹಾಡು ಕರ್ಣಾನಂದವಾಗಿದ್ದು, ಕನ್ನಡಿಗರ ಮನ ಗೆಲ್ಲುತ್ತಿದೆ. 
ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಪನ್ನಗ ಸೋಮಶೇಖರ್ ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಟ್ರೇಲರ್ ನಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರದ ಮುಖ್ಯ ತಾರಾಗಣದಲ್ಲಿ ಭರತ್ ಗೌಡ, ಶೃತಿ ಪ್ರಕಾಶ್, ಪಟೇಲ್ ವರುಣ್ ರಾಜು, ರಾಘವ್ ನಾಗ್, ಅಶ್ವಿನ್ ಹಾಸನ್ ಹಾಗೂ ಕೆ ಎಸ್ ಶ್ರೀಧರ್ ನಟಿಸಿದ್ದಾರೆ