ಶತಮಾನದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ...
ವಿಜಯಪುರ : ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸೋಮವಾರ ಸಂಜೆ 6 ಗಂಟೆಗೆ ಲಿಂಗೈಕ್ಯವಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯ್ ಮಹಾಂತೇಶ್ ದಾನಮ್ಮನವರ್ ಅವರು ರಾತ್ರಿ 10.15 ರ ವೇಳೆಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.ಶ್ರೀಗಳಿಗೆ 82 ವರ್ಷ ವಯಸ್ಸಾಗಿತ್ತು. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದ ವಿಷಯದಲ್ಲಿ ಕಳೆದ ಮೂರು ದಿನಗಳಿಂದ ಹಬ್ಬಿರುವ ವದಂತಿಗಳು ಶನಿವಾರ ಸಂಜೆಯಿಂದ ತಾರಕಕ್ಕೇರಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಜ್ಞಾನಯೋಗಾಶ್ರಮದಲ್ಲಿ ಬೀಡು ಬಿಟ್ಟಿದ್ದರು. ನಾಡಿನ ಮೂಲೆಮೂಲೆಯಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಜ್ಞಾನಯೋಗಾಶ್ರಮದತ್ತ ಧಾವಿಸಿ ಬರತೊಡಗಿದ್ದಾರೆ. ಭಕ್ತರ ವಾಹನ ಸಂಚಾರ ನಿಯಂತ್ರಣ, ಭಕ್ತರ ಅನುಕೂಲಕ್ಕಾಗಿ ಮುನ್ನೆಚ್ಚರಿಕೆಯಾಗಿ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಭಾನುವಾರ ನಡೆದ ಬೆಳವಣಿಯಿಂದ ಕಂಗಾಲಾದ ಜ್ಞಾನಯೋಗಾ ಶ್ರಮದ ಪ್ರಮುಖರು, ಅಂತಿಮ ವಿಧಿಗಳಿಗಾಗಿ ಸಕಲ ಸಿದ್ಧತೆ ನಡೆಸಿದ್ದಾರೆ. ವ್ಯಾಪಕ ಪೊಲೀಸರನ್ನು ನಿಯೋಜಿಸಲಾಗಿದೆ.