ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ.
ವರದಿ : ಮಲ್ಲಿಕಾರ್ಜುನ ಘೋಸರವಾಡ

ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ 25 ಕಿಲೋ ಮೀಟರ್ ದೂರದಲ್ಲಿದೆ.
ಬೆಂಗಳೂರಿನಿಂದ ಸುಮಾರು 250 ಕಿಲೋ ಮೀಟರ್ ದೂರವಿದ್ದು, ಹಿಂದೂ, ಮುಸ್ಲಿಮರಿಗೆ ಯಾತ್ರಾ ಸ್ಥಳವಾಗಿದೆ. ಬೆಟ್ಟ, ಗುಡ್ಡಗಳ ಸಾಲು, ಹಸಿರು ಸಿರಿ, ಜಲಪಾತದ ವೈಭವದ ದೃಶ್ಯಗಳು, ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳನ್ನು ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಇದನ್ನು ಚಂದ್ರದ್ರೋಣ ಪರ್ವತಶ್ರೇಣಿ ಎಂದೂ ಕರೆಯಲಾಗುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ ಅತ್ಯಂತ ಎತ್ತರವಾದ ಬೆಟ್ಟ. 1930 ಮೀಟರ್ ಎತ್ತರ ಇರುವ ಮುಳ್ಳಯ್ಯನಗಿರಿ ಕರ್ನಾಟಕದ ಎತ್ತರದ ಶಿಖರವಾಗಿದೆ.
ಬಾಬಾ ಬುಡನ್ ಗಿರಿ/ ದತ್ತಗಿರಿ 1895 ಮೀಟರ್ ಎತ್ತರದಲ್ಲಿದೆ. ಈ ಬೆಟ್ಟಗಳ ಸಾಲಿನಲ್ಲಿ ಚಾರಣಿಗರು ಚಾರಣ ಕೈಗೊಳ್ಳುತ್ತಾರೆ. ಅಪಾರ ಸಂಖ್ಯೆಯ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಹಲವು ಪ್ರವಾಸಿ ತಾಣಗಳಿದ್ದು, ನೋಡುವುದೇ ಕಣ್ಣಿಗೆ ಹಬ್ಬ. ಚಿಕ್ಕಮಗಳೂರು ಜಿಲ್ಲಾ ಕೇಂದ್ರವಾಗಿದ್ದು, ಎಲ್ಲಾ ಭಾಗಗಳಿಂದಲೂ ಸಾರಿಗೆ ಸಂಪರ್ಕ ಹೊಂದಿದೆ.